ನಾಲ್ಕು ಅಂಗಡಿಗಳಲ್ಲಿ ಸರಣಿ ಕಳವು
ಕುಷ್ಟಗಿ: ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತದ ಬಳಿ ಸರಣಿ ನಾಲ್ಕು ಅಂಗಡಿಗಳಲ್ಲಿ ಕಳವಾದ ಘಟನೆ ಜೂ.8ರ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕಳ್ಳರು ಅಂಗಡಿಯ ತಗಡಿನ ಮೇಲ್ಚಾವಣೆ ಕೊರೆದು ಗುಟ್ಕಾ ಸಿಗರೇಟ್ ಸೇರಿದಂತೆ ಕೆಲ ವಸ್ತುಗಳಿಗೆ ಕನ್ನ ಹಾಕಿದ್ದಾರೆ ಎನ್ನಲಾಗಿದೆ.
ಕುಷ್ಟಗಿ ಬಸವೇಶ್ವರ ವೃತ್ತದಿಂದ ಕೂಗಳತೆಯ ದೂರದಲ್ಲಿರುವ ಸಿದ್ದಲಿಂಗಯ್ಯ ಹಿರೇಮಠ ಅವರಿಗೆ ಸೇರಿದ ಶ್ರೀ ವೀರಭದ್ರೇಶ್ವರ ಎಲೆಕ್ಟ್ರಿಕಲ್, ಸಿದ್ದರಾಮಯ್ಯ ಹಿರೇಮಠ ಅವರಿಗೆ ಸೇರಿದ ಸಿದ್ದರಾಮೇಶ್ವರ ಹಾರ್ಡವೇರ್, ಮುಸ್ತಾಫಾ ಅನಾಸುರ್ ಅವರ ಅಹ್ಮದ್ ಸ್ವಿಟ್ಸ್, ಮಲ್ಲಿಕಾರ್ಜುನ ಗೌಡ ಕೋಳೂರು ಅವರ ಚಂದಾಲಿಂಗೇಶ್ವರ ಗೊಬ್ಬರ ಅಂಗಡಿಗಳಲ್ಲಿ ಕಳವಾಗಿದೆ.
ಈ ಪೈಕಿ ಅಹ್ಮದ್ ಸ್ವೀಟ್ಸ್ ಅಂಗಡಿಯಲ್ಲಿ 4,500ರೂ. ಮೌಲ್ಯದ ಆರ್ ಎಂ ಡಿ 4 ಬಾಕ್ಸ್, 6,500 ರೂ. ಮೌಲ್ಯದ ಕಿಂಗ್ ಸಿಗರೇಟ್ 40 ಪ್ಯಾಕೇಟ್, 17,000 ರೂ. ವಿಮಲ್ 1500 ಪ್ಯಾಕೇಟ್ ಕಳವಾಗಿದ್ದು, ಇನ್ನುಳಿದ ಅಂಗಡಿಗಳ ಗಲ್ಲ ಪೆಟ್ಟಿಗೆಯಲ್ಲಿ ಹಣಕ್ಕಾಗಿ ತಡಕಾಡಿದ್ದಾರೆ.




