ಶಿವಮೊಗ್ಗ: ಮೇ 25ರಂದು ಉದ್ಘಾಟನೆಯಾಗಬೇಕಿದ್ದ ವಿಶ್ವಕರ್ಮ ಸಮುದಾಯ ಭವನದಲ್ಲಿ ಡಬಲ್ ಮರ್ಡರ್
ಶಿವಮೊಗ್ಗ: ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ಡಬಲ್ ಮರ್ಡರ್ ಆಗಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.
ತೀರ್ಥಹಳ್ಳಿಯ ಕುರುವಳ್ಳಿ ಸಮೀಪದ ಸಮುದಾಯ ಭವನದಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಹತ್ಯೆ ಮಾಡಲಾಗಿದೆ.
ಸಮುದಾಯ ಭವನ ನಿರ್ಮಾಣಕ್ಕೆ ಬಂದ ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಲಾಗಿದ್ದು, ಅವರನ್ನು ದಾವಣಗೆರೆ ಮೂಲದ ಮಂಜಪ್ಪ(45) ಹಾಗೂ ಬೀರಪ್ಪ(46) ಎಂದು ಗುರುತಿಸಲಾಗಿದೆ.
ಹಣದ ವ್ಯವಹಾರಕ್ಕೆ ಸಂಬಂಧಪಟ್ಟಂತೆ ರಾಜಪ್ಪ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ತಿಂಗಳ 25 ರಂದು ವಿಶ್ವಕರ್ಮ ಸಮುದಾಯ ಭವನ ಉದ್ಘಾಟನೆಗೊಳ್ಳಬೇಕಿತ್ತು. ಇದೀಗ ಸಮುದಾಯ ಭವನ ಉದ್ಘಾಟನೆಗೂ ಕೆಲವೇ ದಿನಗಳ ಮುನ್ನ ಇಬ್ಬರ ಕೊಲೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




