February 4, 2026

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ಲೋಕಾಯುಕ್ತಕ್ಕೆ ದೂರು
 

0
20230504_173427.jpg

ಬೆಳ್ತಂಗಡಿ: ಅತಿಥಿ ಗೃಹ ನಿರ್ಮಾಣ ಕಾಮಗಾರಿ ಕುರಿತು ಸುಳ್ಳು ದಾಖಲೆ ಸೃಷ್ಟಿಸಿದ ಬಗ್ಗೆ ಆರೋಪಿಸಿ ಬೆಳ್ತಂಗಡಿ  ಹಾಲಿ ಶಾಸಕ ಹರೀಶ್ ಪೂಂಜಾ ಹಾಗೂ ಇತರ ಮೂವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಶೇಖರ್ ಲೈಲಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಹರೀಶ್ ಪೂಂಜಾ ಜೊತೆಗೆ ಕಾರ್ಯನಿರ್ವಾಹಕ ಎಂಜಿನಿಯರ್ ತೌಸೀಫ್ ಅಹಮದ್, ಎಇಇ ಶಿವಪ್ರಸಾದ್ ಅಜಿಲ ಮತ್ತು ಪ್ರವೀಣ್ ಕುಮಾರ್ ವಿರುದ್ಧ ಎಂಬವರ ವಿರುದ್ದ ದೂರು ದಾಖಲಾಗಿದೆ.

ಆರೋಪಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಅತಿಥಿಗೃಹ ನಿರ್ಮಾಣಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆದಾರ ಪ್ರವೀಣ್ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಕಡಿಮೆ ಗುಣಮಟ್ಟದ ಅತಿಥಿ ಗೃಹ ನಿರ್ಮಿಸಿದ್ದಾರೆ. ಇದಲ್ಲದೇ ಉದ್ಘಾಟನೆಯಾಗಿದೆ ಎಂದು ಹಾಲಿ ಶಾಸಕರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಆ ಬಳಿಕ ಮತ್ತೆ ಸುಳ್ಳು ದಾಖಲೆ ಸೃಷ್ಟಿಸಿ ಹೆಚ್ಚುವರಿಯಾಗಿ 2 ಕೋಟಿ ರೂ.ಗೆ ಟೆಂಡರ್ ಕರೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಕೇವಲ ಹೆಸರಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ನಾಲ್ಕನೇ ಆರೋಪಿ ಟೆಂಡರ್ ತೆಗೆದುಕೊಂಡು ಸುಳ್ಳು ರಸೀದಿ ಸೃಷ್ಟಿಸಿ ಸರಕಾರದಿಂದ ಹೆಚ್ಚುವರಿಯಾಗಿ 2 ಕೋಟಿ ರೂ.ಗಳನ್ನು ಪಡೆಯಲು ಮುಂದಾಗಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ.

ಹರೀಶ್ ಪೂಂಜಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ವಿವರಗಳಂತೆ ಯಾವುದೇ ಕಟ್ಟಡವಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಆರೋಪಿಗಳು ಯೋಜನೆಯ ಬಗ್ಗೆ ಸರಿಯಾದ ವಿವರಗಳನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ ಮತ್ತು ಅಪೂರ್ಣ ವಿವರಗಳನ್ನು ನೀಡುತ್ತಿದ್ದಾರೆ.

7 ಕೋಟಿ ರೂ. ಮೌಲ್ಯದ ಯೋಜನೆಯಲ್ಲಿ ನಡೆದಿರುವ ಅಧಿಕಾರ ದುರ್ಬಳಕೆ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ದೂರುದಾರರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!