ಸುಬ್ರಹ್ಮಣ್ಯ: ಅಸ್ವಸ್ಥಗೊಂಡು ಸಂಚಾರ ಮಾಡುತ್ತಿದ್ದ ಕಾಡಾನೆ ಸಾವು
ದಕ್ಷಿಣ ಕನ್ನಡ: ಹಲವು ದಿನಗಳಿಂದ ಅಸ್ವಸ್ಥಗೊಂಡು ಸಂಚಾರ ಮಾಡುತ್ತಿದ್ದ ಕಾಡಾನೆ ಕೊನೆಗೂ ಮೃತಪಟ್ಟಿದೆ. ಸುಬ್ರಹ್ಮಣ್ಯದ ಕೆಂಜಾಳ, ಎರ್ಮಾಯಿಲ್ ಪರಿಸರದಲ್ಲಿ ಈ ಆನೆ ಸಂಚಾರ ಮಾಡುತ್ತಿತ್ತು.
ಗುರುವಾರ ಈ ಕಾಡಾನೆ ಸಂಪೂರ್ಣವಾಗಿ ನಿತ್ರಾಣವಾದ ಸ್ಥಿತಿಯಲ್ಲಿ ಚೇರು ಎಂಬಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು.ಅರಣ್ಯ ಅಧಿಕಾರಿಗಳು ಈ ಆನೆ ನೀರು ಸಹಾ ಕುಡಿಯುತ್ತಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದರು.
ಈ ಕಾಡಾನೆ ವಯೋಸಹಜ ತೊಂದರೆಗಳಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದರು. ಈ ಆನೆಯ ಹಲ್ಲುಗಳು ಉದುರಿರುವುದು ಗಮನಕ್ಕೆ ಬಂದಿದೆ. ಈ ಕಾರಣದಿಂದಾಗಿ ಆನೆ ಆಹಾರ ಸೇವಿಸುವಾಗ ಜೀರ್ಣವಾಗದೇ ವಾಂತಿ ಮಾಡುತ್ತಿರಬಹುದು ಎನ್ನಲಾಗಿತ್ತು.
ಆದರೆ ನಿನ್ನೆ ರಾತ್ರಿ ಸುಮಾರು ಹನ್ನೆರಡು ಗಂಟೆಗಳ ಸುಮಾರಿಗೆ ಇಲ್ಲಿನ ಬಗ್ಪುಣಿ ಎಂಬಲ್ಲಿ ಕಾಡಾನೆಯ ಮೃತದೇಹ ಪತ್ತೆಯಾಗಿದೆ.
ಈ ಆನೆಗೆ ಅಂದಾಜು 50 ರಿಂದ 55 ವರ್ಷ ವಯಸ್ಸು ಇರಬಹುದೆಂದು ಅಂದಾಜಿಸಲಾಗಿದೆ. ಅರಣ್ಯ ಅಧಿಕಾರಿಗಳು, ವೈದ್ಯರು ಆಗಮಿಸಿದ ನಂತರದಲ್ಲಿ ಮಹಜರು ಸೇರಿದಂತೆ ಮುಂದಿನ ಕ್ರಮಗಳು ನಡೆಯಲಿದೆ.




