ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ತುರ್ತು ಸಭೆ: ಹರಿದು ಬಂದ ಜನಸಾಗರ: ಭುಗಿಲೆದ್ದ ಅಸಮಾಧಾನ
ಪುತ್ತೂರು : ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರಿಗೆ ವಿಧಾನ ಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪುತ್ತಿಲ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಈ ಹಿನ್ನೆಲೆ ಕೊಟೇಚಾ ಸಭಾಂಗಣದಲ್ಲಿ ಬೆಂಬಲಿಗರ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ.

ಸಭೆಗೆ ನೂರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದು, ಕೊಟೇಚಾ ಹಾಲ್ ನ ಹೊರಗೆ ಹಾಗೂ ಒಳಗಡೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಅಸಮಾಧಾನ ಬಿಸಿ ಭುಗಿಲೆದ್ದಂತಿದೆ.
ಕಳೆದ ಎರಡು ಅವಧಿಯಲ್ಲಿ ಅರುಣ್ ಅವರ ಹೆಸರು ಅಭ್ಯರ್ಥಿತನಕ್ಕೆ ಕೇಳಿ ಬಂದಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅವರಿಗೆ ಅವಕಾಶ ನೀಡುವಂತೆ ಸಂಘ ಪರಿವಾರದ ತಂಡ ತೀವ್ರ ಒತ್ತಡ ಹೇರಿತ್ತು.
ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಅವರ ಬೆಂಬಲಿಗರು ಟ್ವಿಟರ್ ಅಭಿಯಾನದ ಮೂಲಕ ನರೇಂದ್ರ ಮೋದಿ, ಅಮಿತ್ ಶಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಬಿಜೆಪಿಯ ಸರ್ವೇ ಕಾರ್ಯದಲ್ಲಿ ಕೇಳಿ ಬಂದಿದ್ದ ಆಕಾಂಕ್ಷಿತರ ಪಟ್ಟಿಯಲ್ಲಿ ಅರುಣ್ ಹೆಸರು ಕೂಡ ಇತ್ತು ಎನ್ನಲಾಗಿದ್ದು, ಹೀಗಾಗಿ ಈ ಬಾರಿ ಅರುಣ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆಯನ್ನು ಬೆಂಬಲಿಗರು ಹೊಂದಿದ್ದರು.
ಟಿಕೆಟ್ ಸಿಗದ ಹಿನ್ನೆಲೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಡ ಹೇರಲಾಗುತ್ತಿದ್ದು, ಮುಂದಿನ ನಡೆ ಯಾವ ರೀತಿಯಾಗಿದೆ ಎಂದು ಕಾದು ನೋಡಬೇಕಿದೆ..




