March 23, 2026

ಬೆಳ್ತಂಗಡಿ: ಚಾರ್ಮಾಡಿ ಘಾಟ್‌‌ನಲ್ಲಿ ಕಾರು ಪಲ್ಟಿ: ಗಂಭೀರ ಗಾಯಗೊಂಡಿದ್ದ ಓರ್ವ ಮಹಿಳೆ ಮೃತ್ಯು

0
IMG-20230410-WA0000.jpg

ಬೆಳ್ತಂಗಡಿ: ಕೊಟ್ಟಿಗೆಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಕಂದಕಕ್ಕೆ ಉರುಳಿ ‌ಗಾಯಗೊಂಡಿದ್ದ ಗಾಯಾಳುಗಳ ಪೈಕಿ ಸರೋಜಿನಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಹಾಗೂ ಕುಟುಂಬಸ್ಥರು ಶೃಂಗೇರಿಯ ಕೊಪ್ಪ ಎಂಬಲ್ಲಿ ಮರಣದ ಕಾರ್ಯಕ್ರಮಕ್ಕೆ ಹೋಗಿ ಮರಳುತ್ತಿದ್ದ ವೇಳೆ ರವಿವಾರ ರಾತ್ರಿ ಈ ಅವಘಡ‌ ನಡೆದಿತ್ತು.

ಕಾರಿನಲ್ಲಿ ಪ್ರಯಣಿಸುತ್ತಿದ್ದ ಪುಷ್ಪಾವತಿ ಆರ್.ಶೆಟ್ಟಿ, ಪುತ್ರಿ ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್ಧ್, ಸಾಕ್ಷಿ, ಸಂಬಂಧಿಕ ಮಹಿಳೆ ಸರೋಜಿನಿ ಶೆಟ್ಟಿ ಹಾಗೂ ಕಾರು ಚಾಲಕರಾಗಿದ್ದ ಅರುಣ್ ಗಾಯಗೊಂಡಿದ್ದರು. ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ, ಉಜಿರೆಯ ಎಸ್‌ಡಿಎಂ ಆಸ್ಪತ್ರೆ ಮತ್ತು ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಸರೋಜಿನಿ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದವರು ಉಜಿರೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.

ಈ ಪೈಕಿ ಸರೋಜಿನಿ ಶೆಟ್ಟಿ ಅವರು ಮಂಗಳೂರಿಗೆ ಕರೆದೊಯ್ಯುವ ವೇಳೆಯೇ ದಾರಿ ಮಧ್ಯೆಯೇ ತೀವ್ರವಾಗಿ ಬಳಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ವಿವರ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯ ಪ್ರವೃತರಾದ ಎಸ್‌‌ಡಿಪಿಐ ಚಾರ್ಮಾಡಿ ಗ್ರಾಮ ಸಮಿತಿ ಅಧ್ಯಕ್ಷ ಆಪತ್ಬಾಂದವ ಸಿನಾನ್ ಚಾರ್ಮಾಡಿ ಅವರು ಆಳದಿಂದ ಗಾಯಾಳುಗಳನ್ನು ಮೇಲಕ್ಕೆತ್ತುವ ಕಾರ್ಯದಲ್ಲಿ ತೊಡಗಿಕೊಂಡರು.‌ ಮನೋಜ್ ಬೀಟಿಗೆ ಹಾಗೂ ಊರವರು ಇದಕ್ಕೆ ಸಂಪೂರ್ಣ ಸಹಕಾರ ನೀಡಿದರು. ಕಾರು ಚಾಲಕ ಅರುಣ್ ಕೂಡ ಸಾಕಷ್ಟು ಶ್ರಮವಹಿಸಿದರು.

ಅಪಘಾತದಲ್ಲಿ ಪುಷ್ಪಾವತಿ ಆರ್ ಶೆಟ್ಟಿ ಅವರ ಕೈಯ ಮೂಳೆಮುರಿತಕ್ಕೊಳಗಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಪುತ್ರಿಗೆ ತಲೆಗೆ ಹೆಚ್ಚಿನ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದಾರೆ.

ಇದೀಗ ಮೃತಪಟ್ಟಿರುವ ಸರೋಜಿನಿ ಶೆಟ್ಟಿ ಅವರ ಪತಿ ಈ ಹಿಂದೆಯೇ ಮೃತರಾಗಿದ್ದು, ಮೃತರು ಓರ್ವ ಪುತ್ರ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!