ವಿಟ್ಲ: ಕಾಂಗ್ರೆಸ್ ಗ್ಯಾರೆಂಟಿ ಎಂಬ ಸಂದೇಶದೊಂದಿಗೆ ಮನೆ ಮನೆಗೆ ಕಾರ್ಯಕರ್ತರು: ರಾಜಾರಾಮ್ ಕೆ.ಬಿ
ವಿಟ್ಲ: ಜನತೆ ಬೆಲೆಏರಿಕೆಯಿಂದ ಕಂಗಾಲಾಗಿದ್ದು, ನಾಗರೀಕರು ಮನೆ ನಿರ್ವಹಣೆಗೆ ಪರದಾಡುವ ಸ್ಥಿತಿಯನ್ನು ಬಿಜೆಪಿ ಸರಕಾರ ತಂದೊಡ್ಡಿದೆ. ಈಗಿನ ಸರ್ಕಾರ ಭ್ರಷ್ಟಾಚಾರದ ಕೂಪವಾಗಿರುವ ಕಾರಣ ಬರುವ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲಿದೆ. ಆಗ ಕಾಂಗ್ರೆಸ್ ಗ್ಯಾರೆಂಟಿ ಎಂಬ ಸಂದೇಶದೊಂದಿಗೆ ಮನೆ ಮನೆಗೆ ಕಾರ್ಯಕರ್ತರು ತೆರಳಲಿದ್ದಾರೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ. ಹೇಳಿದರು.
ವಿಟ್ಲದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಸ್ತುವಾರಿ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿ ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಯ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ನೆಮ್ಮದಿ ಜೀವನ ನೀಡಲಿದೆ. ಜಾತಿ, ಮತ, ಪಕ್ಷ ಬೇಧವಿಲ್ಲದೇ ಎಲ್ಲರಿಗೂ ಈ ಸೌಲಭ್ಯ ಲಭ್ಯವಾಗಲಿದೆ. ಪ್ರತಿಯೊಬ್ಬ ಬಿಪಿಎಲ್ ಪಡಿತರದಾರನಿಗೆ ೧೦ ಕೆಜಿ ಅಕ್ಕಿ ಲಭ್ಯವಾಗಲಿದೆ. ಬಿಜೆಪಿಯ ಭ್ರಷ್ಟಾಚಾರವೇ ಈ ಬಾರಿಯ ಚುನಾವಣೆ ವಿಶೇಷ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್ ಮಾತನಾಡಿ ಪ್ರಧಾನಿ ಮೋದಿ ಭ್ರಷ್ಟಾಚಾರರಹಿತ ಸರಕಾರ ಎಂದು ಮಾತನಾಡುತ್ತ ಕರ್ನಾಟಕ್ಕೆ ಅವಮಾನ ಮಾಡಿದ್ದಾರೆ. ಅವರು ಪ್ರತಿಯೊಬ್ಬನ ಖಾತೆಗೆ ಸ್ವಿಸ್ ಬ್ಯಾಂಕಿನಿಂದ ಹಣ ಕೊಡುತ್ತೇನೆಂದು ಇಂದಿನ ತನಕ ಬಂದಿಲ್ಲ. ಸುಳ್ಳು ಭರವಸೆಯನ್ನು ನೀಡುವ ಬಿಜೆಪಿಗೆ ಸತ್ಯ ಮಾತನಾಡಿ ಗೊತ್ತಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಭ್ರಷ್ಟಾಚಾರ ಸಾಕ್ಷಿ ಸಿಕ್ಕಿಲ್ಲವೆನ್ನುತ್ತಿದ್ದಾರೆ. ವಿರೂಪಾಕ್ಷಪ್ಪ ಒದಗಿಸಿದ ಸಾಕ್ಷಿಗಿಂತ ಬೇರೆ ಸಾಕ್ಷಿ ಇನ್ನು ಬೇಕೇ ಎಂದು ಪ್ರಶ್ನಿಸಿದರು.
ವಕ್ತಾರ ರಮಾನಾಥ ವಿಟ್ಲ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಕೆ.ಎಂ.ಅಶ್ರಫ್, ಅಬ್ದುಲ್ರಹಿಮಾನ್ ನೆಲ್ಲಿಗುಡ್ಡೆ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ ಉಪಸ್ಥಿತರಿದ್ದರು.




