January 31, 2026

ಉಳ್ಳಾಲ: ಭೀಕರ ಕಾರು ಅಪಘಾತದ ಮತ್ತೋರ್ವ ಗಾಯಾಳು ಮೃತ್ಯು: ದಾರುಣ ಅಂತ್ಯ ಕಂಡ ಸಹೋದರರು

0
IMG-20230130-WA0029.jpg

ಉಳ್ಳಾಲ: ರಾ.ಹೆ.66ರ ಕೊಲ್ಯ -ಅಡ್ಕ ನಡುವೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿಯೇ ಕಾರು ಚಲಾಯಿಸುತ್ತಿದ್ದ ಸಹೋದರ ಅಬ್ದುಲ್ ರಿಫಾಯಿ ನಿನ್ನೆಯೇ ಮೃತಪಟ್ಟಿದ್ದು, ಉಪ್ಪಳ ಹಿದಾಯತ್ ನಗರದ ಬಾಷರ್ ಅಹಮ್ಮದ್ (22) ಇಂದು ಮೃತಪಟ್ಟಿದ್ದು, ಅವರು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದರು.

ಜ.28 ರಂದು ಗಲ್ಫ್ ನಿಂದ ಆಗಮಿಸಿದ್ದ ಮಹಮ್ಮದ್ ರಿಫಾಯಿ ತಂದೆಯ ಸಹೋದರನ ಪುತ್ರ ಬಾಷರ್ ಅಹಮ್ಮದ್ ಸೇರಿದಂತೆ ಆತನ ಸಹಪಾಠಿಗಳಾದ ಫಾತಿಮ ಹಾಗೂ ರೇವತಿ ಮಂಗಳೂರಿನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಕೊಲ್ಯ ಸಮೀಪ ಕಾರು ಚಾಲಕನ ನಿಯಂತ್ರಣ ಕಳೆದು ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿತ್ತು.

ಮೃತ ಅಬ್ದುಲ್ ರಿಫಾಯಿ ಕಟ್ಟಡ ಗುತ್ತಿಗೆದಾರ ಸಯ್ಯದ್ ಎಂಬವರ ಪುತ್ರನಾಗಿದ್ದರು. ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

ಇನ್ನು ಮೃತ ಬಾಷರ್ ಅಹಮ್ಮದ್ ಸಹೋದರ ರಿಫಾಯಿ ವಿದೇಶದಿಂದ ಬಂದ ಹಿನ್ನೆಲೆಯಲ್ಲಿ ಸಹಪಾಠಿಗಳ ಜೊತೆಗೆ ಒಟ್ಟಾಗಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಾದ ರೇವತಿ ಹಾಗೂ ಫಾತಿಮ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!