ದೇವಸ್ಥಾನದಲ್ಲಿನ ಪೂಜಾ ವಿಧಿ ವಿಧಾನಗಳ ಬಗ್ಗೆ ನ್ಯಾಯಾಲಯಗಳು ನಿರ್ಧರಿಸಲಾಗದು: ಸುಪ್ರೀಂ ಕೋರ್ಟ್
ನವದೆಹಲಿ: ದೇವಸ್ಥಾನದಲ್ಲಿನ ಪೂಜಾ ವಿಧಿ ವಿಧಾನ ಹೇಗಿರಬೇಕು ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಲಾಗದು ಎಂದಿರುವ ಸುಪ್ರೀಂ ಕೋರ್ಟ್, ಈ ವಿಚಾರವಾಗಿ ಸಲ್ಲಿಕೆಯಾದ ಅರ್ಜಿಯೊಂದರ ಸಂಬಂಧ ಯಾವುದೇ ಆದೇಶವನ್ನು ನೀಡಲು ನಿರಾಕರಿಸಿದೆ.
ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪೂಜಾ ವಿಧಿವಿಧಾನಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ‘ದೇವಾಲಯದಲ್ಲಿ ಯಾವ ರೀತಿ ಪೂಜೆ ಮಾಡಬೇಕು? ತೆಂಗಿನಕಾಯಿಯನ್ನು ಹೇಗೆ ಒಡೆಯಬೇಕು? ದೇವರ ಮೂರ್ತಿಗೆ ಹೇಗೆ ಹೂಮಾಲೆ ಹಾಕಬೇಕು ಎಂದೆಲ್ಲ ನ್ಯಾಯಾಲಯ ಹೇಳಲಾಗದು’ ಎಂದು ಮಂಗಳವಾರ ತಿಳಿಸಿದೆ.
‘ದೇವಸ್ಥಾನದ ನಿತ್ಯದ ಕಾರ್ಯಭಾರದಲ್ಲಿ ಸಂವಿಧಾನಬದ್ಧ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ
ಸ್ಪಷ್ಟಪಡಿಸಿತು.
ತಿರುಪತಿ ಬಾಲಾಜಿ ದೇವಸ್ಥಾನವು ಸಾರ್ವಜನಿಕ ದೇವಾಲಯವಾಗಿದ್ದು, ಅಲ್ಲಿ ನಡೆಯಬೇಕಾದ ಸೇವೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಶ್ರೀವಾರಿ ದಾದಾ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಧಾರ್ಮಿಕ ವಿಧಿ ವಿಧಾನಗಳ ಪಾಲನೆ ವಿಚಾರದಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಹೇಗೆ ಮಧ್ಯ ಪ್ರವೇಶಿಸಲಾದೀತು ಎಂದು ಪ್ರಶ್ನಿಸಿತು. ಸಂಪ್ರದಾಯ ಉಲ್ಲಂಘನೆಯಾಗುತ್ತಿದೆ ಎನ್ನುವುದಾದರೆ, ಸಾಕ್ಷ್ಯಾಧಾರಗಳೊಂದಿಗೆ ವಿಚಾರಣಾ ನ್ಯಾಯಾಲಯ ಇದನ್ನು ಪರಿಶೀಲಿಸಬಹುದು ಎಂದು ಹೇಳಿದೆ.





