ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮುಖಂಡನ ಮೃತದೇಹವನ್ನು ನದಿಯಿಂದ ಹೊರತೆಗೆದ ಗೂಡಿನಬಳಿಯ ಮುಸ್ಲಿಮರು
ಪಾಣೆಮಂಗಳೂರು: ಬಜರಂಗದಳದ ಮುಖಂಡನೋರ್ವನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಬಂಟ್ವಾಳದ ಪಾಣೆಮಂಗಳೂರು ಹಳೆ ಸೇತುವೆ ಬಳಿ ನಡೆದಿದೆ.
ಬಂಟ್ವಾಳ ತಾಲೂಕಿನ ಸಜೀಪ ನಿವಾಸಿ ರಾಜೇಶ್ ಪೂಜಾರಿ ಸಾವನ್ನಪ್ಪಿದವರು.
ರಾಜೇಶ್ ಪೂಜಾರಿ ಅವರು ಸಜೀಪ ವಿಶ್ವ ಹಿಂದೂ ಪರಿಷತ್ ಮುಖಂಡ, ಬಜರಂಗದಳ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ್ ಆಗಿದ್ದರು ಎಂದು ತಿಳಿದುಬಂದಿದೆ.
ಯುವಕ ನದಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮುಸ್ಲಿಮ್ ಯುವಕರ ತಂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದೆ.
ಗೂಡಿನಬಳಿಯ ಮುಸ್ಲಿಮ್ ಯುವಕರಿಗೆ ವಿಷಯ ತಿಳಿದಿದೆ. ವಿಷಯ ತಿಳಿಯುತ್ತಿದ್ದಂತೆ ಈಜು ತಜ್ಞರಾದ ಮುಹಮ್ಮದ್, ಇಬ್ರಾಹೀಂ, ಹಾರಿಸ್ ಹಾಗೂ ಇಕ್ಬಾಲ್ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಅಲ್ಲಿಗೆ ಬಂದಿದ್ದಾರೆ. ಅಗ್ನಿಶಾಮಕ ದಳದ ಬೋಟ್’ನಲ್ಲಿ ಮುಹಮ್ಮದ್ ಹಾಗೂ ತಂಡ ನದಿಗೆ ಇಳಿದು ಎರಡನೇ ಪಿಲ್ಲರ್ ಬಳಿ ಹುಡುಕಾಟ ನಡೆಸಿದೆ. ಬಳಿಕ ಮುಹಮ್ಮದ್ ಮತ್ತು ಇತರರು ನದಿಗೆ ಇಳಿದು ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಬಂಟ್ವಾಳ ನಗರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.




