ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದದ ಬೀಜವನ್ನು ಉತ್ಪದಿಸುವ ಲ್ಯಾಬ್: ಸಿದ್ದರಾಮಯ್ಯ
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ, ಕೋಮುವಾದ ಇಲ್ಲಿಂದಲೇ ಆರಂಭವಾಗಿದೆ. ಕೋಮುವಾದದ ಬೀಜ ಇಲ್ಲಿನ ಲ್ಯಾಬ್ ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಹರೇಕಳ ಕಡವಿನಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸಕ್ಕೆ ಬಿಜೆಪಿಯವರು ಮುಂದಾಗುತ್ತಾರೆ. ಬಹುತ್ಬದ ದೇಶ ಎಲ್ಲರೂ ಒಗ್ಗಟ್ಟಿನಲ್ಲಿರುವ ದೇಶ. ಈಗಿನ ಡಬಲ್ ಇಂಜಿನ್ ಸರಕಾರ ಎಲ್ಲವನ್ನೂ ಮುರಿದುಹಾಕಿದೆ. ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ನಂ. 1 ಆಗಲಿದೆ. ಎಲ್ಲರಿಗೂ ರಕ್ಷಣೆ ಸಿಗಬೇಕು. ಸಂವಿಧಾನದಲ್ಲಿ ಎಲ್ಲರೂ ಸಮಾನ ಎಂದು ಅಂಬೇಡ್ಕರ್ ಬರೆದುಕೊಟ್ಟಿದ್ದಾರೆ. ಯಾರು ಯಾವ ಧರ್ಮವನ್ನೂ ಅನುಸರಿಸಬಹುದು ಎಂದು ಹೇಳಲಾಗಿದೆ. ಆದರೆ ಸಮಾನ ಅವಕಾಶ, ಸಮಾನ ಹಕ್ಕು ಎಲ್ಲವನ್ನೂ ನಶಿಸಿಹಾಕಲಾಗುತ್ತಿದೆ ಎಂದರು.