ಬೆಳ್ಳಾರೆ: ಅಪಹರಣ ಪ್ರಕರಣ, ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು
ಬೆಳ್ಳಾರೆ:ಅತ್ತೆ, ಪತ್ನಿ ಮತ್ತು ಇನ್ನಿತರ ಅಪರಿಚಿತರು ಸೇರಿಕೊಂಡು ಯುವ ಉದ್ಯಮಿ ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ನವೀನ್ ಅವರ ತಾಯಿ ನೀರಜಾಕ್ಷಿ ಅವರು ನೀಡಿದ ದೂರಿನಂತೆ ಮಾಧವ ಗೌಡ, ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಮತ್ತು ನವೀನ್ ರೈ ತಂಬಿನಮಕ್ಕಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆಯ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ನಿನ್ನೆ ಮಧ್ಯಾಹ್ನ 12:45 ರ ಸುಮಾರಿಗೆ ಈ ಮನೆಗೆ ಕದಂಬ ಆಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅವರ ಪುತ್ರಿ ಸ್ಪಂದನಾ ಹಾಗೂ ಪರಶುರಾಮ ಎಂಬವರಲ್ಲದೇ ಇನ್ನೂ ಏಳೆಂಟು ಜನರ ತಂಡವಿತ್ತು ಎನ್ನಲಾಗಿದೆ.
ಅಂಬ್ಯುಲೆನ್ಸ್ ನಿಂದ ಇಳಿದು ಬಂದ ದುಷ್ಕರ್ಮಿಗಳು ಏಕಾಏಕಿ ನವೀನ್ ಅವರನ್ನು ಅಪಹರಿಸಲು ಯತ್ನಿಸಿದ್ದು, ತಡೆಯಲು ಹೋದ ನವೀನ್ ಅವರ ತಾಯಿ ಹಾಗೂ ಅತ್ತಿಗೆ ಮೇಲೆ ಹಲ್ಲೆಗ ನಡೆಸಿದ್ದು, ಕಾಲಿನಿಂದ ಒದ್ದು ನವೀನ್ ಅವರನ್ನು ಎಳೆದೊಯ್ದಿದ್ದಾರೆ ಎಂದು ನವೀನ್ ಅವರ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.




