ಫಲಿತಾಂಶ ವಿಳಂಬ ಖಂಡಿಸಿ ಮಂಗಳೂರು ವಿವಿ ಆಡಳಿತ ಕಚೇರಿಗೆ ಎಬಿವಿಪಿ ಮುತ್ತಿಗೆ: ರಾಜೀನಾಮೆ ಮುಂದಾದ ಕುಲಸಚಿವರು
ಉಳ್ಳಾಲ: ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಫಲಿತಾಂಶ ವಿಳಂಬ ಖಂಡಿಸಿ ಕೊಣಾಜೆ ಮಂಗಳೂರು ವಿ.ವಿ ಆಡಳಿತ ಕಚೇರಿಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ಇಂದು ನಡೆದಿದೆ.
ವಿ.ವಿ ಆಡಳಿತ ಕಚೇರಿಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು, ಈ ನಡುವೆ ಆಡಳಿತ ಕಚೇರಿಯಲ್ಲಿ ನಡೆಯುತ್ತಿದ್ದ ಸಿಂಡಿಕೇಟ್ ಸಭೆಗೆ ಎಬಿವಿಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆಹಿಡಿದಿದ್ದಾರೆ.
ಈ ಕುರಿತು ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯ್ಲ, ಮಾತನಾಡಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವುದು, ಅಂಕಪಟ್ಟಿ ಬಾರದೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಅವಕಾಶ ಸಿಗದಿರುವುದು, ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದಿರುವುದು, ಎಲ್ಲ ಸಮಸ್ಯೆಗಳು ಒಂದು ಕಡೆಯಾದರೆ ಎನ್ಇಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ಇದ್ದರೂ ಸಹ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ನ ಮೌಲ್ಯಮಾಪನವನ್ನು ನಡೆಸಿ ಫಲಿತಾಂಶವನ್ನು ಈವರೆಗೂ ನೀಡದೆ ಚೆಲ್ಲಾಟವಾಡುತ್ತಿದೆ ಎಂದರು.
ಎಲ್ಲ ಸಮಸ್ಯೆಗಳಿಗೆ ಕುಲಸಚಿವರೇ ಕಾರಣ ಎಂಬ ಆರೋಪಕ್ಕೆ ಭಾವುಕರಾದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಾ ಫಲಿತಾಂಶ ವಿಳಂಬಕ್ಕೆ ಪರೀಕ್ಷಾಂಗ ಕುಲಸಚಿವರ ರಾಜೀನಾಮೆ ಆಗ್ರಹಿಸುತ್ತಿದ್ದು ಆ ಕಾರಣದಿಂದ ನನ್ನಿಂದ ಸಮಸ್ಯೆ ಆಗಿದ್ದು ಪರಿಹಾರ ದೊರಕುವುದಾದರೆ ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲು ರಾಜೀನಾಮೆ ಪತ್ರ ಬರೆದು ಸಿದ್ಧನಾಗಿಯೇ ಬಂದಿದ್ದೇನೆ ಎಂದರು.
ಪರೀಕ್ಷಾಂಗ ಕುಲಸಚಿವರ ಭರವಸೆಯ ಮೇರೆಗೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.




