ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೊಡ್ಡ ಹುಂಡಿಯನ್ನೇ ಎಗರಿಸಿದ ಕಳ್ಳರು
ರಾಯಚೂರು: ಹುಂಡಿಯ ಬೀಗ ಮುರಿದು ಹಣ ಕಳವು ಮಾಡುವುದು ಸಾಮಾನ್ಯ. ಆದರೆ, ತಾಲೂಕಿನ ಮನ್ಸಲಾಪುರದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೊಡ್ಡ ಗಾತ್ರದ ಹುಂಡಿಯನ್ನೇ ಎಗರಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಬೆಟ್ಟದ ಮೇಲಿರುವ ದೇವಸ್ಥಾನದ ಬೀಗ ಮುರಿದ ಖದೀಮರು ಹುಂಡಿ ಹೊತ್ತೊಯ್ದಿದ್ದಾರೆ. ದೊಡ್ಡ ಹುಂಡಿಯಾಗಿದ್ದು, ಏನಿಲ್ಲವೆಂದರೂ ಐದಾರು ಜನ ಸೇರಿ ಕೃತ್ಯ ಎಸಗಿರುವ ಶಂಕೆ ಇದೆ ಎನ್ನಲಾಗುತ್ತಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಾತ್ರೆ ನಡೆದಿದ್ದು, ಹುಂಡಿಗೆ ಲಕ್ಷಾಂತರ ಹಣ ಸಂಗ್ರಹಗೊಂಡಿತ್ತು. ಇಷ್ಟರಲ್ಲೇ ಹುಂಡಿ ಹಣ ಎಣಿಕೆ ಮಾಡುವ ಬಗ್ಗೆ ಗ್ರಾಮಸ್ಥರು ಚರ್ಚಿಸಿದ್ದರು. ಅಷ್ಟರಲ್ಲೇ ದುರ್ಘಟನೆ ನಡೆದಿದೆ. ದೇವಸ್ಥಾನ ಆವರಣದಲ್ಲಿ ಜನ ಕೂಡ ಮಲಗಿದ್ದರು. ಚಳಿ ಹೆಚ್ಚಾಗಿರುವ ಕಾರಣ ಜನರಿಗೆ ಎಚ್ಚರಿಕೆಯಾಗಿಲ್ಲ. ಬೆಟ್ಟದ ಮೇಲೆ ವಾಹನ ತೆಗೆದುಕೊಂಡು ಕೃತ್ಯ ಎಸಗಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.




