March 20, 2026

ಉಡುಪಿ: ರಾತ್ರೋರಾತ್ರಿ ಕ್ರಿಸ್ತಿಯನ್ ಪ್ರಾರ್ಥನಾ ಕೇಂದ್ರವನ್ನು ನೆಲಸಮಗೊಳಿಸಿ, ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ ಪ್ರಕರಣ: ಸುದೀರ್ಘ ವಿಚಾರಣೆ ಬಳಿಕ ಬಜರಂಗದಳದ 19 ಮಂದಿ ಆರೋಪಿಗಳಿಗೆ ಖುಲಾಸೆ

0
IMG-20221209-WA0002.jpg

ಉಡುಪಿ: 2013ರಲ್ಲಿ ಶಿರ್ವ ಠಾಣೆ ವ್ಯಾಪ್ತಿಯ ಮೂಡುಬೆಳ್ಳೆಯಲ್ಲಿ ಕ್ರಿಸ್ತಿಯನ್ ಪ್ರಾರ್ಥನಾ ಕೇಂದ್ರಕ್ಕೆ ರಾತ್ರೋರಾತ್ರಿ ನುಗ್ಗಿದ ಬಜರಂಗದಳ ಕಾರ್ಯಕರ್ತರು ಪ್ರಾರ್ಥನಾ ಕೇಂದ್ರವನ್ನು ನೆಲಸಮಗೊಳಿಸಿ, ಅಲ್ಲಿದ್ದವರಿಗೆ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿತ್ತು. ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್, ಬಜರಂಗದಳ ಸಂಘಟನೆಗೆ ಸೇರಿದ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಶಿರ್ವ ಬಳಿಯ ಮೂಡುಬೆಳ್ಳೆ, ಕಟ್ಟಿಂಗೇರಿ ಎಂಬಲ್ಲಿ ಪ್ರಾರ್ಥನಾ ಕೇಂದ್ರ ನಡೆಸುತ್ತಿದ್ದ ಜಾಗಕ್ಕೆ ಶಿರ್ವ, ಸೂಡ ಗ್ರಾಮದ ಬಜರಂಗದಳ ಕಾರ್ಯಕರ್ತರು ರಾತ್ರಿ ವೇಳೆ ನುಗ್ಗಿದ್ದರು. ಅಲ್ಲದೆ, ಅಲ್ಲಿದ್ದವರಿಗೆ ಮಾರಕಾಸ್ತ್ರಗಳಿಂದ ಹಲ್ಲೆಯನ್ನೂ ನಡೆಸಿದ್ದರು. ಅಲ್ಲಿ ಮತಾಂತರ ಕಾರ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದರು. ಘಟನೆ ಬಗ್ಗೆ ಪ್ರಾರ್ಥನಾ ಕೇಂದ್ರದ ಮುಖ್ಯಸ್ಥ ಪಾಸ್ಟರ್ ರೋಶನ್ ಲೋಬೊ ಶಿರ್ವ ಠಾಣೆಗೆ ದೂರು ನೀಡಿದ್ದು 19 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪೊಲೀಸರ ಚಾರ್ಜ್ ಶೀಟ್ ಪ್ರಕಾರ, ಉಡುಪಿಯ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಕೋರ್ಟ್ 18 ಮಂದಿ ಸಾಕ್ಷ್ಯಗಳನ್ನು ಕರೆಸಿ ವಿಚಾರಣೆ ಕೈಗೊಂಡಿತ್ತು. ಮಾರಕಾಸ್ತ್ರಗಳು, ಮೊಬೈಲ್ ಫೋನ್, ಟೀ ಶರ್ಟ್ ಸೇರಿದಂತೆ 14 ವಿವಿಧ ರೀತಿಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕಡೆಯ ವಾದವನ್ನು ಆಲಿಸಿ ತೀರ್ಪು ನೀಡಿದೆ. ನ್ಯಾಯಾಧೀಶ ವಿನಾಯಕ ವಾಂಖೇಡೆ ತೀರ್ಪು ಪ್ರಕಟಿಸಿದ್ದು, ಸಾಕ್ಷಿದಾರರು ಆರೋಪಿಗಳನ್ನು ಗುರುತಿಸಲು ವಿಫಲವಾಗಿದ್ದಾರೆಂದು ಹೇಳಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಮಟ್ಟಾರು ರತ್ನಾಕರ ಹೆಗ್ಡೆ, ಇ.ಬಾಲಸುಬ್ರಹ್ಮಣ್ಯ ರಾವ್, ಬೈಲೂರು ರವೀಂದ್ರ ದೇವಾಡಿಗ, ನಿತೇಶ್ ಶೆಟ್ಟಿ, ನಿವೇದಿತಾ ದೇವಾಡಿಗ ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!