ವಿಟ್ಲ: ಜಾತಿ ನಿಂದನೆ ಮತ್ತು ಬೆದರಿಕೆ ಪ್ರಕರಣ: ವಿಟ್ಲ ಪ.ಪಂ ಮಾಜಿ ಸದಸ್ಯ ಶ್ರೀಕೃಷ್ಣ ನಿರ್ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ
ವಿಟ್ಲ: ಪಟ್ಟಣ ಪಂಚಾಯತ್ ಉದ್ಯೋಗಿಯು ನೀಡಿದಂತಹ ಜಾತಿ ನಿಂದನೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಆರೋಪಿತರಾಗಿದ್ದ ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ, ಕಳೆದ ಪಂಚಾಯತ್ ಚುನಾವಣೆಯಲ್ಲಿ ಹಲವು ವಾರ್ಡುಗಳಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಶ್ರೀಕೃಷ್ಣ ವಿಟ್ಲ ಅವರನ್ನು ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಯವರು ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ.
ಪ್ರಕರಣದ ದೂರುದಾರ ಸಹಿತ ಎಂಟು ಜನ ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸಿದಾಗ ದೂರುದಾರ ಸಹಿತ ಎಲ್ಲಾ ಸಾಕ್ಷಿದಾರರು ಅಂತಹ ಘಟನೆಗಳು ನಡೆದಿಲ್ಲ, ಆರೋಪಿತರು ಯಾವುದೇ ರೀತಿಯ ಜಾತಿನಿಂದನೆ ಮಾಡಿಲ್ಲ, ಬೆದರಿಕೆ ಹಾಕಿಲ್ಲ ಎಂದು ಸಾಕ್ಷಿ ನುಡಿದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಲಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಶ್ರೀಕೃಷ್ಣ ಆರೋಪಿಸಿದ್ದರು. ಇದರ ಬೆನ್ನಲ್ಲೇ ಶ್ರ್ರೀಕೃಷ್ಣ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.
ತೀರ್ಪಿನ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶ್ರೀಕೃಷ್ಣ ವಿಟ್ಲರವರು ಒಂದು ವರ್ಷದ ಮೊದಲೇ ನಂಗೆ ನ್ಯಾಯ ದೊರಕಿದೆ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ಅಭಿವೃದ್ಧಿ ಪರವಾದ ಕಾರ್ಯಗಳು ಮುಂದೆ ಕೂಡ ಮಾಡುತ್ತೇನೆ. ಶೀಘ್ರದಲ್ಲೇ ಎಲ್ಲಾ ಮಾಧ್ಯಮಗಳ ಮುಂದೆ ಸವಿಸ್ತಾರವಾಗಿ ಮಾತನಾಡಲಿದ್ದೇನೆ ಎಂದು ತಿಳಿಸಿದರು.
ಶ್ರೀಕೃಷ್ಣ ವಿಟ್ಲ ಅವರ ಪರವಾಗಿ ಮಂಗಳೂರಿನ ಖ್ಯಾತ ವಕೀಲ ಜಗದೀಶ್ ಕೆ.ಆರ್. ಅವರು ವಾದಿಸಿದ್ದರು.





