February 4, 2026

ಗ್ಯಾಂಗ್ ರೇಪ್ ಪ್ರಕರಣ:
ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಸೇರಿ ಇಬ್ಬರಿಗೆ ಜೀವಾವಧಿ ಶಿಕ್ಷೆ

0
1600x960_402229-gayatri-prajapati-.jpg

ಲಖನೌ: ಉತ್ತರ ಪ್ರದೇಶದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ರಾಜ್ಯದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಹಾಗೂ ಇನ್ನೂ ಇಬ್ಬರಿಗೆ ಲಖನೌ ನ ವಿಶೇಷ ಎಂಎಲ್‌ಎ/ಎಂಪಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಗಾಯತ್ರಿ ಪ್ರಜಾಪತಿ ಹಾಗೂ ಇನ್ನೂ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬುಧವಾರದಂದು ಆರೋಪಿಗಳನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ನ.12ಕ್ಕೆ ಕಾಯ್ದಿರಿಸಿತ್ತು.

ಮೂವರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯದ ಎಂಪಿ/ಎಂಎಲ್‌ಎ ಕೋರ್ಟ್ ನ ನ್ಯಾಯಾಧೀಶರಾದ ಪವನ್ ಕುಮಾರ್ ರೈ ತಲಾ 2 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ.

ಆದರೆ ಪ್ರಕರಣದ ಇನ್ನೂ ನಾಲ್ವರು ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದ್ದು, ಪಿಸಿಎಸ್ ಅಧಿಕಾರಿಯ ಪುತ್ರ ವಿಕಾಸ್ ವರ್ಮ, ರೂಪೇಶ್, ಅಮರಿಂದ್ರ ಸಿಂಗ್ ಪಿಂಟು, ಮಾಜಿ ಸಚಿವರ ಗನ್ನರ್ ಚಂದ್ರಪಾಲ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ.

ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಬಳಿಕ, ಗಾಯತ್ರಿ ಪ್ರಜಾಪತಿ ಅವರ ವಕೀಲರು ಶಿಕ್ಷೆಯನ್ನು ರಾಜಕೀಯ ದ್ವೇಷ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ಸಚಿವರು ಕೋರ್ಟ್ ತೀರ್ಪನ್ನು ಅಲ್ಲಾಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಲಿದ್ದಾರೆ ಎಂದು ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಜಾಪತಿ ಗ್ಯಾಂಗ್ ರೇಪ್ ಆರೋಪದಡಿ 2017 ರಿಂದಲೂ ಜೈಲಿನಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!