ಸಾಲಗಾರರ ಕಾಟ: ಮೂವರು ಮಕ್ಕಳು ಸೇರಿ ಐವರು ವಿಷ ಸೇವಿಸಿ ಆತ್ಮಹತ್ಯೆ
ಬಿಹಾರ: ಬಿಹಾರದ ನವಾಡ ನಗರದ ಆದರ್ಶ ಸೊಸೈಟಿ ಬಳಿ ವ್ಯಾಪಾರಿಯೊಬ್ಬರು ತಮ್ಮ ಕುಟುಂಬ 6 ಸದಸ್ಯರೊಂದಿಗೆ ಸಾಮೂಹಿಕವಾಗಿ ವಿಷ ಸೇವಿಸಿದ್ದು ಘಟನೆಯಲ್ಲಿ ಮೂವರು ಮಕ್ಕಳು ಸೇರಿ ಐದು ಮಂದಿ ಸಾವನ್ನಪ್ಪಿದ್ದು, ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಈ ಘಟನೆಯಲ್ಲಿ ಕೇದಾರನಾಥ ಗುಪ್ತಾ, ಪತ್ನಿ ಅನಿತಾ ದೇವಿ, ಇಬ್ಬರು ಪುತ್ರಿಯರಾದ ಶಬನಮ್ ಕುಮಾರಿ, ಗುಡಿಯಾ ಕುಮಾರಿ ಮತ್ತು ಪುತ್ರ ಪ್ರಿನ್ಸ್ ಕುಮಾರ್ ಮೃತಪಟ್ಟಿದ್ದಾರೆ. ಇನ್ನೋರ್ವ ಮಗಳು ಸಾಕ್ಷಿ ಕುಮಾರಿ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇದಾರನಾಥ ಗುಪ್ತಾ ಅವರು ಮೂಲತಃ ರಾಜೌಲಿ ನಿವಾಸಿಯಾಗಿದ್ದು, ನಾವಡಾದ ನ್ಯೂ ಏರಿಯಾದಲ್ಲಿ ವಾಸಿಸುತ್ತಿದ್ದರು ಮತ್ತು ವಿಜಯ್ ಬಜಾರ್ನಲ್ಲಿ ಹಣ್ಣಿನ ಅಂಗಡಿಯನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ತಂದೆ ಸಾಲ ಮಾಡಿದ್ದು, ಸಾಲಗಾರರ ಕಿರಿ ಕಿರಿ ಹೆಚ್ಚಾಗಿ ತಂದೆ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಕೇದಾರನಾಥ ಅವರ ಮಗಳು ಸಾಕ್ಷಿ ಕುಮಾರಿ ತಿಳಿಸಿದ್ದಾರೆ.




