ಸುಳ್ಯ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಪ್ರಕರಣ ದಾಖಲು
ಸುಳ್ಯ: ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿಲಾಗಿದ್ದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಸಂದರ್ಭ ಯುವಕನೋರ್ವ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯತಿ ಗೌಡ ಎಂಬಾತನೆ ಪ್ರಕರಣದ ಆರೋಪಿ.
ಸಂತ್ರಸ್ತ ಬಾಲಕಿಯು ತಂಗಿ, ಮಾವ ಹಾಗೂ ಅಜ್ಜಿಯ ಜೊತೆಗೆ ಅಮರ ಪಡ್ನೂರು ಗ್ರಾಮದ ಚೊಕ್ಕಾಡಿಯಲ್ಲಿ ಗೋಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲಕಿಯ ಮಾವ ಮತ್ತು ಅಜ್ಜಿ ಊಟಕ್ಕೆ ತೆರಳಿದ ಸಂದರ್ಭ ಅಲ್ಲೇ ಹಿಂಬದಿಯಲ್ಲಿ ಕುಳಿತಿದ್ದ ಸ್ಥಳೀಯ ಯುವಕ ಯತಿ ಎಂಬಾತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ.
ನಂತರ ತನಗೆ ನ್ಯಾಯ ಕೊಡಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ದೂರು ನೀಡಿದ್ದು, ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಪಿ.ಸುಂದರ ಪಾಟಾಜೆ ನೊಂದ ಬಾಲಕಿಯ ಮತ್ತು ತಂಗಿ ಹಾಗೂ ಅಜ್ಜಿ, ಮಾವ ಇವರನ್ನೆಲ್ಲಾ ಜೊತೆಯಾಗಿ ಸೇರಿಸಿಕೊಂಡು ಬೆಳ್ಳಾರೆ ಪೊಲೀಸ್ ಠಾಣೆಗೆ ಕರೆತಂದು ಯುವಕನ ಮೇಲೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಘಟನೆಯ ನಂತರ ಬಾಲಕಿಯು ಮಕ್ಕಳ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ ಅಲ್ಲಿಂದಲೇ ಬೆಳ್ಳಾರೆ ಠಾಣೆಗೆ ದೂರು ಬಂದಿದ್ದು, ಈ ಮೇರೆಗೆ ಬೆಳ್ಳಾರೆ ಠಾಣಾಧಿಕಾರಿಯವರು ಯತಿ ಗೌಡ ಎಂಬವರ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಪ್ರಾಂರಂಭಿಸಿರುವುದಾಗಿ ತಿಳಿದುಬಂದಿದೆ.




