ಬಂಟ್ಟಾಳ: ‘ಸರ್ಕಾರದಿಂದ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ನೀಡಲಾಗುತ್ತಿದೆ’ – ರಮಾನಾಥ್ ರೈ ವಾಗ್ದಾಳಿ
ಬಂಟ್ವಾಳ: ಸರ್ಕಾರದಿಂದ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.
ಬಂಟ್ವಾಳ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಕಳಪೆ ಗುಣ ಮಟ್ಟದ ಆಹಾರ ಪದಾರ್ಥಗಳನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆಯನ್ನು ದೂರಮಾಡಿ ಅವರಲ್ಲಿ ಪೌಷ್ಠಿಕಾಂಶವನ್ನು ತುಂಬಿ ಸದೃಡರನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ಬಂದಿರುವ ಅಕ್ಷರ ದಾಸೋಹ ಯೋಜನೆಯ ಶಾಲೆಗಳಲ್ಲಿ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದ ಅಕ್ಕಿ, ಬೇಳೆಕಾಳುಗಳಲ್ಲಿ ಹುಳ, ನುಸಿಗಳು ತುಂಬಿಕೊಂಡಿದೆ. ಬೆಲ್ಲಗಳು ದುರ್ವಸಾನೆ ಬೀರುತ್ತಿದ್ದು, ವಿದ್ಯಾರ್ಥಿಗಳನ್ನು ಮತ್ತಷ್ಟು ರೋಗಪೀಡಿತರನ್ನಾಗಿಸುತ್ತಿದ್ದಾರೆ ಎಂದರು.
ಇನ್ನು ಅಕ್ಕಿ ಚೀಲ ತೆರೆದರೆ ಸಾಕು ಅದರಿಂದ ಲೆಕ್ಕವಿಲ್ಲದಷ್ಟು ಹುಳಗಳು ಬಾಹ್ಯಲೋಕಕ್ಕೆ ತೆರೆದುಕೊಳ್ಳುತ್ತಿವೆ. ಇದು ಬಡವರ ಮಕ್ಕಳ ಹೊಟ್ಟೆಗೆ ಅನ್ಯಾಯ ಮಾಡುವಂತಹ ಕೃತ್ಯ. ಇದನ್ನು ಯಾರು ಮೆಚ್ಚುವುದಿಲ್ಲ, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.





