ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ
ಬಂಟ್ವಾಳ: ಸಮಾಜದ ವಿವಿಧ ಸಂಘ ಸಂಸ್ಥೆಗಳು ನಿರಂತರವಾಗಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿವೆ. ಈ ನಿಟ್ಟಿನಲ್ಲಿ ಜಮೀಯ್ಯತುಲ್ ಫಲಾಹ್ ಕಳೆದ ಮೂರೂವರೆ ದಶಕಗಳಿಂದ ಸಾವಿರಾರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ವಿದ್ಯಾರ್ಥಿ ವೇತನದ ಮೂಲಕ ಸ್ಪೂರ್ತಿಯನ್ನು ನೀಡಿದೆ ಎಂದು ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಘಟಕದ ಅಧ್ಯಕ್ಷ ರಶೀದ್ ವಿಟ್ಲ ಹೇಳಿದರು.
ಅವರು ಮೆಲ್ಕಾರ್ ಬಿರ್ವ ಸಭಾಂಗಣದಲ್ಲಿ ನಡೆದ ಸಂಸ್ಥೆಯ ಬಂಟ್ವಾಳ ಘಟಕದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಮಾತನಾಡಿ ಇಂದು ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇನ್ನೊಬ್ಬರ ಶಿಕ್ಷಣಕ್ಕೆ ನೆರವು ನೀಡುವಂತಾಗಲಿ ಎಂದರು.
ಉಧ್ಯಮಿಗಳಾದ ಬಿ.ಮೊಹಮ್ಮದ್ ಹಾಜಿ ಸೂರಲ್ಪಾಡಿ, ಅಬ್ದುಲ್ ರಝಾಕ್ ಹಾಜಿ ಗೋಳ್ತಮಜಲು, ಜಮೀಯ್ಯತುಲ್ ಫಲಾಹ್ ಜಿಲ್ಲಾ ಘಟಕದ ಕೋಶಾಧಿಕಾರಿ ಎಫ್.ಎಂ. ಬಶೀರ್ ಫರಂಗಿಪೇಟೆ ಭಾಗವಹಿಸಿದ್ದರು.





ಸಮಾರಂಭದಲ್ಲಿ ಪೂರ್ವಭಾವಿ ಯಾಗಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ನಡೆಸಿಕೊಟ್ಟರು. ಉಪಾಧ್ಯಕ್ಷ ಶೇಕ್ ರಹ್ಮತುಲ್ಲಾ ಕಿರಾತ್ ಪಠಿಸಿದರು. ಜೊತೆ ಕಾರ್ಯದರ್ಶಿ ಸುಲೈಮಾನ್ ಸೂರಿಕುಮೇರು ಮತ್ತು ಹಕೀಂ ಕಲಾಯಿ ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಕೆ.ಕೆ.ಶಾಹುಲ್ ಹಮೀದ್ ಸ್ವಾಗತಿಸಿ, ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ವಂದಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಹಾಗೂ ಪತ್ರಿಕಾ ಕಾರ್ಯದರ್ಶಿ ಬಿ.ಎಂ. ತುಂಬೆ ಕಾರ್ಯಕ್ರಮ ನಿರೂಪಿಸಿದರು.




