September 20, 2024

ಬಂಟ್ಟಾಳ: ನಿರತ ಸಾಹಿತ್ಯ ಸಂಪದ ಬೆಳ್ಳಿಹೆಜ್ಜೆ ಆಮಂತ್ರಣ ಪತ್ರಿಕೆ ಬಿಡುಗಡೆ

0

ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿದ್ದು, ನ.6ರಂದು ಮಧ್ಯಾಹ್ನದಿಂದ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿ.ಸಿ.ರೋಡಿನ ಕೈಕುಂಜೆ ಕನ್ನಡ ಭವನದಲ್ಲಿ ನಡೆಯಿತು.

ಹಿರಿಯ ಪತ್ರಕರ್ತ ಹರೀಶ ಮಾಂಬಾಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ 25 ವರ್ಷಗಳಿಂದ ಸಾಮಾನ್ಯ ಬರೆಹಗಾರರು, ಉದಯೋನ್ಮುಖ ಕವಿಗಳಿಗೆ ವೇದಿಕೆ ದೊರಕಿಸಿಕೊಟ್ಟ ನಿರತ ಸಾಹಿತ್ಯ ಸಂಪದದಲ್ಲಿ ಪ್ರಥಮ ಕವನವಾಚನ ಮಾಡಿದವರಿಂದು ನಾಡಿನ ಶ್ರೇಷ್ಠ ಕವಿಗಳಾಗಿ ಮೆರೆದಿದ್ದು, ಇದು ನಿರತದ ಹೆಗ್ಗಳಿಕೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರತ ಗೌರವಾಧ್ಯಕ್ಷ ವಿ.ಸು.ಭಟ್, ಉತ್ಸಾಹಿ ಯುವಕರು ಆರಂಭಿಸಿದ ಸಾಹಿತ್ಯ ಸಂಪದ ಇಂದು ಬೆಳ್ಳಿಹೆಜ್ಜೆಯನ್ನಿಡುತ್ತಿರುವುದು ಸಂತಸದ ವಿಚಾರ ಎಂದರು. ಹಿರಿಯ ಕವಯತ್ರಿ ಗೀತಾ ಎಸ್.ಕೋಂಕೋಡಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭ ನಿರತ ಬೆಳೆದುಬಂದ ದಾರಿಯನ್ನು ಅಬ್ದುಲ್ ಮಜೀದ್ ಎಸ್ ವಿವರಿಸಿದರು. ನಿರತ ಅಧ್ಯಕ್ಷ ಬೃಜೇಶ್ ಅಂಚನ್ ವಂದಿಸಿದರು. ಸಮಾರಂಭದಲ್ಲಿ ಜಯರಾಮ ಪಡ್ರೆ, ದಿನೇಶ್ ಎಂ.ತುಂಬೆ, ವಿನೋದ್ ಪುದು, ಸಾಹುಲ್ ಹಮೀದ್ ಉಪಸ್ಥಿತರಿದ್ದರು.

ನ.6ರಂದು ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಮಧ್ಯಾಹ್ನ 2ರಿಂದ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದ್ದು, ಪ್ರೊ.ತುಕಾರಾಮ ಪೂಜಾರಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ನಿರತ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಪ್ರೊ.ಚಂದ್ರಕಲಾ ನಂದಾವರ ಅವರಿಗೆ ನೀಡಲಾಗುವುದು. ನಿರತ ಅನಿಯತಕಾಲಿಕ ಕೈಬರೆಹ ಪತ್ರಿಕೆ ಅನಾವರಣ, ಸಾಹಿತ್ಯದಿಂಚರ ಎಂಬ ಇಪ್ಪತ್ತೈದು ಕವಿಗಳ ಸಮ್ಮಿಲನ ಇರಲಿದ್ದು, ಸಂಜೆ 6ರಿಂದ ಭಾವತರಂಗ, ಯಕ್ಷ ಸಂವಾದ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!