ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಮಹಾಸಭೆ:
557.92 ಕೋಟಿ ರೂ. ವ್ಯವಹಾರ, 2.26 ಕೋಟಿ ಲಾಭ : ಜಗನ್ನಾಥ ಸಾಲ್ಯಾನ್
ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2020-21ನೇ ಸಾಲಿನಲ್ಲಿ 557.92 ಕೋಟಿ ರೂ. ವ್ಯವಹಾರ ನಡೆಸಿ, 2.26 ಕೋಟಿ ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಎ ತರಗತಿಯಲ್ಲಿ ಮುನ್ನಡೆಯುತ್ತಿದ್ದೇವೆ. ಸದಸ್ಯರಿಗೆ ಶೇ.20 ಲಾಭಾಂಶ ವಿತರಿಸಲಾಗುವುದು ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್ ಹೇಳಿದರು.
ಅವರು ಮಂಗಳವಾರ ವಿಟ್ಲದ ಶಾಂತಿನಗರ ಅಕ್ಷಯ ಸಮುದಾಯ ಭವನದಲ್ಲಿ ನಡೆದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 67ನೇ ವರ್ಷದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಕೆ. ಮಾತನಾಡಿ 2021-22ನೇ ಸಾಲಿನಲ್ಲಿ 115.06 ಕೋಟಿ ರೂ ಠೇವಣಾತಿಯನ್ನು ಹೊಂದಿದೆ. 7193 ಸದಸ್ಯರಿದ್ದು 2.38 ಕೋಟಿ ರೂ. ಪಾಲುಬಂಡವಾಳವಿದೆ. 64.67 ಕೋಟಿ ರೂ. ಹೊರಬಾಕಿ ಸಾಲವಿದೆ. ಬ್ಯಾಂಕಿನ ಶಾಖೆಗಳು ಉತ್ತಮ ಲಾಭ ಗಳಿಸುತ್ತಿವೆ. ಬ್ಯಾಂಕಿನ ಸಾರ್ವಜನೋಪಕಾರ ನಿ„ಯಿಂದ 6.36 ಲಕ್ಷ ರೂ. ಸಾರ್ವಜನಿಕವಾಗಿ ವಿನಿಯೋಗಿಸಲಾಗಿದೆ. ಬ್ಯಾಂಕಿನ ಸರ್ವತೋಮುಖ ಪ್ರಗತಿಯನ್ನು ಗಮನಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ 2021-22ನೇ ಸಾಲಿನಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದಿನ ವರ್ಷ ಕನಿಷ್ಠ ಶೇ.10ರಷ್ಟು ಪ್ರಗತಿಯನ್ನು ಸಾದಿಸುವ ಗುರಿ ಇರಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕಿನ ಸದಸ್ಯರು ಆಡಳಿತ ಮಂಡಳಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಜತೆ ಸಂವಾದ ನಡೆಸಿದರು. ಸದಸ್ಯರು ಹಲವು ಮಾಹಿತಿಗಳನ್ನು ಪಡೆದುಕೊಳ್ಳುವುದರ ಜತೆಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 67ನೇ ವರ್ಷದ ಮಹಾಸಭೆಯನ್ನು ಹಿರಿಯ ಸದಸ್ಯ ಸೀತಾರಾಮ ಪಕ್ಕಳ ಮತ್ತು ಗೋಪಾಲಕೃಷ್ಣ ಉಪಾಧ್ಯಾಯ ಅವರು ಉದ್ಘಾಟಿಸಿದರು. ಉಪಾಧ್ಯಕ್ಷ ಮೋಹನ್ ಕೆ. ಎಸ್.ಉರಿಮಜಲು, ನಿರ್ದೇಶಕರಾದ ಎಂ.ಹರೀಶ್ ನಾಯಕ್, ಮನೋರಂಜನ್ ಕೆ.ಆರ್., ವಿಶ್ವನಾಥ ಎಂ., ಕೃಷ್ಣ ಕೆ., ಉದಯ ಕುಮಾರ್ ಎ., ಬಾಲಕೃಷ್ಣ ಪಿ.ಎಸ್., ದಿವಾಕರ ವಿ., ದಯಾನಂದ ಆಳ್ವ ಕೆ., ಸುಂದರ ಡಿ., ಗೋವರ್ಧನ ಕುಮಾರ್ ಐ., ಶುಭಲಕ್ಷ್ಮಿ, ಜಯಂತಿ ಎಚ್.ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್ ಸ್ವಾಗತಿಸಿದರು. ನಿರ್ದೇಶಕ ವಿಶ್ವನಾಥ ಎಂ.ವಂದಿಸಿದರು. ಬಿ.ಸಿರೋಡು ಶಾಖಾಧಿಕಾರಿ ಕೆ.ಶ್ರೀನಿಧಿ ವಿ.ಕುಡ್ವ ಆಶಯಗೀತೆ ಹಾಡಿದರು. ವಿಟ್ಲ ಕಚೇರಿ ಸಿಬ್ಬಂದಿ ಮಹೇಶ್ ಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು.




