ಕಲ್ಲಿದ್ದಲು ತುಂಬಿದ್ದ ಟ್ರಕ್, ಖಾಸಗಿ ಬಸ್ಗೆ ಢಿಕ್ಕಿ: 6 ಮಂದಿ ಸಾವು, 20 ಜನರಿಗೆ ಗಂಭೀರ
ಭುವನೇಶ್ವರ: ಒಡಿಶಾದ ಝಾರ್ಸುಗುಡದಲ್ಲಿ ಶುಕ್ರವಾರ ರಾತ್ರಿ ಕಲ್ಲಿದ್ದಲು ತುಂಬಿದ ಟ್ರಕ್ ಹಾಗೂ ಖಾಸಗಿ ಕಂಪನಿಯೊಂದರ ನೌಕರರನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಝಾರ್ಸುಗುಡ – ಸಂಬಲ್ಪುರ್ ಬಿಜು ಎಕ್ಸ್ಪ್ರೆಸ್ವೇನಲ್ಲಿ ರೂರ್ಕೆಲಾ ಬೈಪಾಸ್ ಬಳಿ ಅಪಘಾತ ಸಂಭವಿಸಿದೆ.
ಪೊಲೀಸ್ ವರದಿಗಳ ಪ್ರಕಾರ, ಝಾರ್ಸುಗುಡ ಬೈಪಾಸ್ ರಸ್ತೆಯ ಪವರ್ ಹೌಸ್ ಚಾಕ್ ಬಳಿ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಜೆಎಸ್ಡಬ್ಲ್ಯು ಸ್ಥಾವರದ ನೌಕರರು ಜಾರ್ಸುಗುಡ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಗಾಯಾಳುಗಳನ್ನು ಸಂಬಲ್ಪುರದ ಬುರ್ಲಾದಲ್ಲಿರುವ ಆಸ್ಪತ್ರೆಗೆ ಸಾಗಿಸಲಾಗಿದೆ.




