ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಸೌಹಾರ್ದತೆ ಹಾಗೂ ಸಹಕಾರ ಬದುಕಿನಲ್ಲಿ ಜತೆಗಿರಬೇಕು: ಒಡಿಯೂರು ಶ್ರೀ
ವಿಟ್ಲ: ತಾನು ಬದುಕುವ ಜತೆಗೆ ಹಲವರಿಗೆ ಬದುಕು ಕಲ್ಪಿಸುವ ಕಾರ್ಯ ನಡೆಯಬೇಕು. ಸೇವಾ ಮನೋಭಾವ ಇದ್ದಾಗ ಸಂಘಟನೆಯ ಜತೆಗೆ ನಾವೂ ಬೆಳೆಯಬಹುದು. ಸೌಹಾರ್ದತೆ ಹಾಗೂ ಸಹಕಾರ ಬದುಕಿನಲ್ಲಿ ಜತೆಗಿರಬೇಕು. ಸಂಘಟನೆಯಲ್ಲಿ ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ಶಾಖೆಗಳು ಬೆಳೆದಂತೆ ಬೇರುಗಳು ಸದೃಢವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2021-22ನೇ ಸಾಲಿನ 11ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷ ಎ. ಸುರೇಶ್ ರೈ ಮಾತನಾಡಿ ಸಂಘ 17ಶಾಖೆಗಳ ಮೂಲಕ 375.80ಕೋಟಿ ವ್ಯವಹಾರ ನಡೆಸಿ, 2.58ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ ರೈತರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ. ಸಹಕಾರಿಯ ಪಾರದರ್ಶಕ ವ್ಯವಹಾರವನ್ನು ಸದಸ್ಯರ ಮುಂದೆ ತೆರೆದಿಟ್ಟಿದೆ. ಶೇ.15 ಡಿವಿಡೆಂಟ್ ಅನ್ನು ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಹಕಾರಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಸಿಬ್ಬಂದಿಯವರನ್ನು ಗೌರವಿಸಲಾಯಿತು.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಸಿ. ಎ. ಬಾಲಸುಬ್ರಹ್ಮಣ್ಯ ಎನ್., ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಶಾರದಮಣಿ, ಸರಿತಾ ಅಶೋಕ್, ಯು. ದೇವಪ್ಪ ನಾಯಕ್ ಉಪ್ಪಳಿಗೆ, ಮೋನಪ್ಪ ಪೂಜಾರಿ ಕೆರೆಮನೆ ಕಾವು, ಸೋಮಪ್ಪ ನೈಕ್ ಕಡಬ, ಗಣೇಶ್ ಅತ್ತಾವರ, ಭವಾನಿಶಂಕರ್ ಶೆಟ್ಟಿ, ಅಕೋಕ್ ಕುಮಾರ್ ಯು.ಎಸ್., ವೃತ್ತಿಪರ ನಿರ್ದೇಶಕ ಎಂ. ಉಗ್ಗಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವರದಿವಾಚಿಸಿದರು. ನಿರ್ದೇಶಕ ಗಣಪತಿ ಭಟ್ ಸೇರಾಜೆ ವಂದಿಸಿದರು. ಪವಿತ್ರ ಎನ್. ಕಾರ್ಯಕ್ರಮ ನಿರೂಪಿಸಿದರು.




