ದೀಪಾವಳಿ ಹಬ್ಬದ ಪೂಜಾ ಸಾಮಗ್ರಿ ಕೆರೆಗೆ ಹೋದ ಇಬ್ಬರು ಸಹೋದರಿಯರು ನೀರುಪಾಲು
ಬೆಳಗಾವಿ: ದೀಪಾವಳಿ ಹಬ್ಬದ ಪೂಜಾ ಸಾಮಾಗ್ರಿ ವಿಸರ್ಜಿಸಲು ಹೋದ ಇಬ್ಬರು ಸಹೋದರಿಯರು ನೀರು ಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ಸಾಂಬಾ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ನೇತ್ರಾ ಈರಣ್ಣ(8) ಕೊಳವಿ ಹಾಗೂ ಪ್ರಿಯಾ ಈರಣ್ಣ ಕೊಳವಿ(6) ನೀರುಪಾಲಾಗಿರುವ ಸಹೋದರಿಯರು.
ಈ ಇಬ್ಬರು ಬಾಲಕಿಯರು ತಮ್ಮ ಹಿರಿಯ ಸಹೋದರಿಯೊಂದಿಗೆ ದೀಪಾವಳಿ ಹಬ್ಬದ ಪೂಜಾ ಸಾಮಾಗ್ರಿಗಳನ್ನು ವಿಸರ್ಜಿಸಲು ಇಲ್ಲಿನ ಬಾಳೆಗಿಡ ಕೆರೆಗೆ ಹೋಗಿದ್ದರು. ಈ ಸಂದರ್ಭ ಈ ದುರಂತ ಸಂಭವಿಸಿದೆ.
ಹಿರಿಯ ಸಹೋದರಿ ನೋಡು ನೋಡುತ್ತಿದ್ದಂತೆ ತಂಗಿಯರು ಕೆರೆಗೆ ಬಿದ್ದಿದ್ದಾರೆ. ಆಕೆ ತಕ್ಷಣ ಬೊಬ್ಬೆಯಿಟ್ಟಿದ್ದಾಳೆ. ಸ್ಥಳೀಯರು ರಕ್ಷಣೆಗೆ ಧಾವಿಸಿದ್ದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಈಜುಗಾರರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




