ಮಡಿವಾಳೇಶ್ವರ ಮಠದ ಸ್ವಾಮೀಜಿಯ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ
ಬೈಲಹೊಂಗಲ: ತಾಲ್ಲೂಕಿನ ನೇಗಿನಹಾಳದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ (50) ಸೋಮವಾರ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.
ಮಠದ ಆವರಣದಲ್ಲಿರುವ ಅವರ ಮಲಗುವ ಕೋಣೆಯಲ್ಲಿಯೇ ಶ್ರೀಗಳು ನೇಣು ಹಾಕಿಕೊಂಡಿದ್ದಾರೆ. ಇಂದಿನಂತೆ ಸೋಮವಾರ ಬೆಳಿಗ್ಗೆ ಅವರ ಸೇವಕ ಶ್ರೀಗಳನ್ನು ನಿದ್ದೆಯಿಂದ ಎಬ್ಬಿಸಲು ಹೋದರು. ಮಲಗುವ ಕೋಣೆಯ ಬಾಗಿಲಿಗೆ ಒಳಗಡೆಯಿಂದ ಚಿಲಕ ಹಾಕಲಾಗಿತ್ತು. ಎಷ್ಟು ಹೊತ್ತು ಕೂಗಿದರೂ ಸ್ವಾಮೀಜಿ ಓಗೊಡಲಿಲ್ಲ. ಬಳಿಕ ಕಿಟಕಿಯನ್ನು ತಳ್ಳಿ ಇಣುಕಿದಾಗ ಅವರು ನೇಣು ಹಾಕಿಕೊಂಡಿದ್ದು ಗೊತ್ತಾಗಿದೆ.
ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡರೂ ಪೂರ್ಣ ತನಿಖೆಯ ನಂತರ ಸಾವಿನ ರೀತಿ ಗೊತ್ತಾಗಲಿದೆ. ಸಾವಿಗೆ ನಿಖರ ಕಾರಣ ಏನು ಎಂಬುದು ಸದ್ಯ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ರಾತ್ರಿ 12ರವರೆಗೂ ಶ್ರೀಗಳು ಭಕ್ತರ ಜತೆಗೆ ಮಾತನಾಡಿದ್ದರು. ಎಂದಿನಂತೆ ಸಹಜವಾಗಿಯೇ ಇದ್ದರು. ನಂತರ ಮಲಗಲು ಅವರ ಕೋಣೆಗೆ ಹೋಗಿದ್ದರು.
“2007ರಲ್ಲಿ ಅವರು ಗುರು ಮಡಿವಾಳೇಶ್ವರ ಪೀಠವನ್ನು ಅಲಂಕರಿಸಿದ್ದರು. ಅವರ ಸೇವಕರು ಹಾಗೂ ಕೆಲವು ಶಿಷ್ಯರು ಕೂಡ ಮಠದಲ್ಲೇ ಇರುತ್ತಾರೆ. ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಸಮಸ್ಯೆ ಏನಿತ್ತು ಎಂಬುದು ನಮಗೂ ಅಂದಾಜಿಸಲು ಆಗುತ್ತಿಲ್ಲ. ಪ್ರತಿ ದಿನ ಮಠದಲ್ಲಿ ಶ್ರಾವಣದ ಭಜನೆ ಮಾಡಿದ್ದೇವು. ಶ್ರೀಗಳ ಮಕ್ಕಳಂತೆ ಅವರನ್ನು ಗೌರವದಿಂದ ಕಾಣುತ್ತಿದ್ದೇವು. ಈ ವಿಷಯ ಭಕ್ತರನ್ನು ದಿಗಿಲುಗೊಳಿಸಿದೆ” ಎಂದು ಶ್ರೀಗಳ ಆಪ್ತರೊಬ್ಬರು ಹೇಳಿದರು.




