ತೊಕ್ಕೊಟ್ಟು: ಬಸ್ ಬ್ರೇಕ್ ಫೇಲ್ ಆಗಿ ಕಾರಿಗೆ ಡಿಕ್ಕಿ
ತೊಕ್ಕೊಟ್ಟು: ಬಸ್ ಬ್ರೇಕ್ ಫೇಲ್ ಆಗಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ತೊಕ್ಕೊಟ್ಟಿನಲ್ಲಿ ನಡೆದಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. 21 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಮಾಲೀಕ ಮುಡಿಪು ನಿವಾಸಿ ಮೊಹಮ್ಮದ್ ಮತ್ತು ಸಂಬಂಧಿ ಪ್ರಯಾಣಿಕ ಅಪಾಯವಿಲ್ಲದೆ ಪಾರಾಗಿದ್ದಾರೆ.
ಕಾರು ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಆದರೆ ಬ್ರೇಕ್ ಫೇಲ್ ಆದ ಪರಿಣಾಮ ನೇರ ತೊಕ್ಕೊಟ್ಟು ಜಂಕ್ಷನ್ನಿಗೆ ಬಸ್ಸನ್ನು ಚಲಾಯಿಸಿದ್ದು, ಈ ವೇಳೆ ಉಳ್ಳಾಲದಿಂದ ಮುಡಿಪುವಿನತ್ತ ತೆರಳುತ್ತಿದ್ದ ಜೈಲೋ ಕಾರಿಗೆ ಢಿಕ್ಕಿ ಹೊಡೆದಿದೆ. ಜನದಟ್ಟಣೆ ಹೆಚ್ಚಿರುವ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭಾವ್ಯ ಅನಾಹುತ ತಪ್ಪಿದೆ. ಜೆಪ್ಪು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




