ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ: ಸುರತ್ಕಲ್, ಕಾಟಿಪಳ್ಳ, ಕೋಡಿಕೆರೆ ಸೇರಿದಂತೆ ಹಲವೆಡೆ ವಾಹನಗಳ ಟಿಂಟ್ ತಪಾಸಣೆ
ಸುರತ್ಕಲ್: ಒಂದು ತಿಂಗಳಿನಿಂದ ಸುರತ್ಕಲ್ ಸೂಕ್ಷ್ಮ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದು, ಪೊಲೀಸ್ ಇಲಾಖೆ ಬಿಗಿ ಭದ್ರತೆ ಏರ್ಪಡಿಸಿದೆ.
ಈ ನಡುವೆ ಸುರತ್ಕಲ್, ಕಾಟಿಪಳ್ಳ, ಕೋಡಿಕೆರೆ ಸೇರಿದಂತೆ ಹಲವೆಡೆ ವಾಹನಗಳ ಗಾಜಿನ ಮೇಲೆ ಟಿಂಟ್ ಅಳವಡಿಸಿಕೊಂಡು ಸಂಚರಿಸುವ ಶೋಕಿ ಹೆಚ್ಚಾಗಿದ್ದು, ಅಂಥ ವಾಹನಗಳ ಮೇಲೆ ಪೊಲೀಸರ ಕಣ್ಣು ನೆಟ್ಟಿದೆ.
ಜಿಲ್ಲೆಯಲ್ಲಿ ಮೂವರ ಹತ್ಯೆ ಪ್ರಕರಣ, ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ ವಿಚಾರವಾಗಿ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಅಪರಾಧ ತಡೆಗೆ ಮತ್ತೆ ಚೆಕ್ ಪಾಯಿಂಟ್ ನಿರ್ಮಿಸಿ ವಾಹನ ತಪಾಸಣೆ ತೀವ್ರಗೊಳಿಸಿರುವ ಪೊಲೀಸರು ದಂಡ ವಿಧಿಸಿ ಟಿಂಟ್ ತೆಗೆಸುತ್ತಿದ್ದಾರೆ.
ಕಳೆದ ವರ್ಷ ಟ್ರಾಫಿಕ್ ಚೆಕ್ ಡ್ರೈವ್ ಮಾಡಿದ ಸಂದರ್ಭ ನೂರಾರು ವಾಹನಗಳ ಟಿಂಟ್ ತೆಗೆಯಲಾಗಿದ್ದರೂ ಇದೀಗ ಮತ್ತಷ್ಟು ವಾಹನಗಳಲ್ಲಿ ಕಂಡು ಬರುತ್ತಿದೆ. ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಸಾವಿರಾರು ವಾಹನಗಳಿದ್ದು ದರೋಡೆ, ಜಾನುವಾರು ಸಾಗಾಟ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರು, ಜೀಪು ಮತ್ತಿತರ ವಾಹನಗಳ ಗಾಜು ಪಾರದರ್ಶಕವಾಗಿರಬೇಕೆಂಬುದು ಸಂಚಾರ ವಿಭಾಗದ ನಿರ್ಧಾರವಾಗಿದೆ. ಸುರತ್ಕಲ್ನಲ್ಲಿ ಮಂಗಳವಾರ ಹಲವಾರು ವಾಹನಗಳನ್ನು ತಡೆದು ಟಿಂಟ್ ತೆಗೆಯಲಾಗಿದೆ.