ಯುವಕನ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಮಂಜೇಶ್ವರದಲ್ಲಿ ಅರೆಸ್ಟ್
ಮಂಜೇಶ್ವರ: ಕೊಚ್ಚಿಯ ಫ್ಲ್ಯಾಟ್ ವೊಂದರಲ್ಲಿ ನಡೆದ ಯುವಕನ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಜೇಶ್ವರದಿಂದ ವಿಶೇಷ ತನಿಖಾ ತಂಡ ಬಂಧಿಸಿದೆ.
ಕೋಝಿಕ್ಕೋಡ್ ಕೋಳಾರಿಕಂಡಿಯ ಅರ್ಷಾದ್ (೨೭) ಹಾಗೂ ಕೊಯಿಲಾಂಡಿಯ ಅಶ್ವಥ್ (೨೩) ಬಂಧಿತರು. ಇವರ ಬಳಿಯಿಂದ ಒಂದೂವರೆ ಕಿಲೋ ಗಾಂಜಾ, ೫. ೨೦ ಗ್ರಾಂ ಎಂ ಡಿ ಎಂ ಎ ಮಾದಕ ವಸ್ತು, ೧೦೪ ಗ್ರಾಂ ಹಾಶಿಶ್ ನ್ನು ವಶಪಡಿಸಿಕೊಳ್ಳಲಾಗಿದೆ.
ಮೊಬೈಲ್ ಫೋನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಇಬ್ಬರನ್ನು ಮಂಜೇಶ್ವರ ರೈಲ್ವೆ ನಿಲ್ದಾಣ ದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಮಲಪ್ಪುರಂ ವಂಡೂರಿನ ಸಜೀವ ಕೃಷ್ಣ ಎಂಬವರು ಕೊಚ್ಚಿ ಕಾಕನಾಡಿನ ಫ್ಲ್ಯಾಟ್ ವೊಂದರಲ್ಲಿ ಕೊಲೆ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೊಲೆಯ ಬಳಿಕ ಇಬ್ಬರು ಪರಾರಿಯಾಗಿದ್ದು, ಕರ್ನಾಟಕಕ್ಕೆ ಪರಾರಿಯಾಗಲೆತ್ನಿಸಿದ ಇವರನ್ನು ಕಾರ್ಯಾಚರಣೆ ನಡೆಸಿದ ಕಾಸರಗೋಡು ಡಿವೈಎಸ್ಪಿ ವಿ.ವಿ ಮನೋಜ್ ನೇತೃತ್ವದ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.




