ಕಡಬ: ಗಲಾಟೆಯ ಪ್ರಕರಣದಲ್ಲಿ ಆರೋಪಿಯ ಮಾಹಿತಿ ಕೊಟ್ಟ ವಿಚಾರಕ್ಕೆ ಯುವಕನಿಗೆ ಇರಿತ ಪ್ರಕರಣ: ಆರೋಪಿಯ ಬಂಧನ
ಕಡಬ: ಆರು ತಿಂಗಳ ಹಿಂದೆ ಉಪ್ಪಿನಂಗಡಿ ಯಲ್ಲಿ ನಡೆದ ಹಸಿಮೀನು ವ್ಯಾಪಾರಕ್ಕೆ ಸಂಬಂಧಿಸಿದ ಗಲಾಟೆಯ ಪ್ರಕರಣದಲ್ಲಿ ಆರೋಪಿಯ ಬಗ್ಗೆ ಮಾಹಿತಿ ಕೊಟ್ಟ ವಿಚಾರವನ್ನು ನೆಪವಾಗಿಟ್ಟುಕೊಂಡು ಕ್ಷುಲ್ಲಕ ಕಾರಣವೊಡ್ಡಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯ ಗೊಳಿಸಿದ ಘಟನೆ ಸೋಮವಾರ ಸಂಜೆ ಕೊಯಿಲ ಗ್ರಾಮದ ಏಂತಾರು ಎಂಬಲ್ಲಿ ನಡೆದಿದೆ.
ಕೊಯಿಲ ಗ್ರಾಮದ ಏಂತಾರು ಮನೆ ಇಬ್ರಾಹಿಂ ಅವರ ಪುತ್ರ ಮಹಮ್ಮದ್ ನವಾಜ್ (29) ಗಾಯ ಗೊಂಡವರು. ಪ್ರಕರಣದ ಆರೋಪಿ ಆದಂ ಅವರ ಪುತ್ರ ನೌಫಾಲ್ (29)ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಾತನಾಡಲು ಇದೆ ಎಂದು ಮಹಮ್ಮದ್ ನವಾಜ್ನನ್ನು ತನ್ನ ಅಂಗಡಿಯ ಬಳಿ ಕರೆಸಿಕೊಂಡ ನೌಫಾಲ್ 6 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರಕ್ಕೆ ಸಂಬಂಧಿಸಿದ ಗಲಾಟೆಯ ವಿಚಾರದಲ್ಲಿ “ನನ್ನ ತಮ್ಮ ಸಿನಾನ್ ಬಗ್ಗೆ ನೀನು ಯಾಕೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು’ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಅನಂತರ ಅಂಗಡಿಯಲ್ಲಿಯೇ ಇದ್ದ ಚಾಕುವಿನಿಂದ ಮಹಮ್ಮದ್ ನವಾಜ್ನ ಹೊಟ್ಟೆಗೆ ಇರಿದು ಗಂಭೀರ ಗಾಯಗೊಳಿಸಿದ್ದಾನೆ ಎಂದು ದೂರಲಾಗಿದೆ. ಬಳಿಕ ಗಾಯಾಳುವನ್ನು ಹಕೀಲ್ ಮತ್ತು ಆಸೀಫ್ ಅವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




