ವಿಟ್ಲ: ಮನೆಗೆ ಬರುವುದಿಲ್ಲ ಎಂದು ಹೇಳಿ ಹೋದ ಯುವಕ ನಾಪತ್ತೆ
ವಿಟ್ಲ: ಮನೆಗೆ ಬರುವುದಿಲ್ಲ ಎಂದು ತಾಯಿಯ ಬಳಿ ತಿಳಿಸಿದ ಗಾರೆ ಕೆಲಸ ಮಾಡುತ್ತಿದ್ದ ಯುವಕನೋರ್ವ ನಾಪತ್ತೆಯಾಗಿರುವುದಾಗಿ ಆತನ ತಂದೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಮಂಗಳವಾರ ದಾಖಲಾಗಿದೆ.
ಪುಣಚ ಗ್ರಾಮದ ಅಜೇರುಮಜಲು ಮನೆಯ ಅಪ್ಪು ಪಾಠಾಳಿ ಎಂಬವರು ಈ ಕುರಿತು ದೂರು ನೀಡಿದ್ದು, ತನ್ನ ಮಗ ಬಾಲಕೃಷ್ಣ (39) ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಅವಿವಾಹಿತರಾಗಿರುವ ಬಾಲಕೃಷ್ಣ, ಗಾರೆ ಕೆಲಸ ಮಾಡಿಕೊಂಡಿದ್ದು, ಈತ ಸ್ವಸಹಾಯ ಸಂಘದಲ್ಲಿ 1 ಲಕ್ಷ ರೂ ಸಹಿತ ಹಲವು ಕಡೆ ಸಾಲ ಮಾಡಿಕೊಂಡಿದ್ದು, ಸಕಾಲಕ್ಕೆ ಮರುಪಾವತಿ ಮಾಡಿಲ್ಲ ಎಂದು ಆತನ ತಂದೆ ದೂರಿನಲ್ಲಿ ತಿಳಿಸಿದ್ದು, ಆಗಸ್ಟ್ 8ರಂದು ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು, ಸಂಜೆ ಸುಮಾರು 3.45ರ ವೇಳೆ ತಾಯಿಯಲ್ಲಿ ಮುಂದಕ್ಕೆ ಮನೆಗೆ ಬರುವುದಿಲ್ಲ ಎಂದು ತಿಳಿಸಿ ಹೊರಟು ಹೋಗಿದ್ದಾನೆ. ಈವರೆಗೆ ಮನೆಗೆ ಬಾರದೇ ಇದ್ದು, ಆತನ ಮೊಬೈಲ್ ನಂಬ್ರ ಸ್ವಿಚ್ ಆಫ್ ಆಗಿರುತ್ತದೆ ಎಂದವರು ಮಾಹಿತಿ ನೀಡಿದ್ದಾರೆ. ಇದರನ್ವಯ ನಾಪತ್ತೆ ಪ್ರಕರಣ ವಿಟ್ಲ ಠಾಣೆಯಲ್ಲಿ ದಾಖಲಾಗಿದೆ.



