ಶೋಧ ಕಾರ್ಯಕ್ಕೆ ತೆರಳಿದ್ದ CID ಅಧಿಕಾರಿಗಳನ್ನೇ ಬಂಧಿಸಿದ ಪೊಲೀಸರು
ಕೋಲ್ಕತ್ತ: ಜಾರ್ಖಂಡ್ನ ಮೂವರು ಶಾಸಕರಿಂದ ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿ ಮತ್ತು ಗುವಾಹಟಿಯಲ್ಲಿ ಶೋಧ ಕಾರ್ಯಕ್ಕೆ ತೆರಳಿದ್ದ ನಮ್ಮ ಅಧಿಕಾರಿಗಳನ್ನು ಸ್ಥಳೀಯ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಹೇಳಿದೆ.
ಬಂಧಿತ ಮೂವರು ಶಾಸಕರ ಆಪ್ತರಾಗಿರುವ, ಆರೋಪಿಯೊಬ್ಬರಿಗೆ ಸೇರಿದ ಆಸ್ತಿಯ ಮೇಲೆ ದಾಳಿ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ನಮ್ಮ ಅಧಿಕಾರಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯದ ವಾರೆಂಟ್ ಹೊರತಾಗಿಯೂ ನವದೆಹಲಿಯ ಸೌತ್ ಕ್ಯಾಂಪಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆರೋಪಿಯ ನಿವಾಸದಲ್ಲಿ ಶೋಧ ನಡೆಸದಂತೆ ನಿರ್ಬಂಧಿಸಲಾಗಿದೆ ಎಂದು ಹಿರಿಯ ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




