ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಆರಂಭ
ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ನಗರದ ಹೊರವಲಯದ ಕುಂದವಾಡದಲ್ಲಿರುವ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಬುಧವಾರ ಆರಂಭವಾಗಿದೆ.
ಅಮೃತ ಮಹೋತ್ಸವದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಿದ್ದು ಎಸ್. ಎಸ್. ಪ್ಯಾಲೇಸ್ ಮೈದಾನದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ಜನರು ಸಮಸ್ಯೆ ಎದುರಿಸುವಂತಾಯಿತು.
ಕಾರ್ಯಕ್ರಮದ ಕೇಂದ್ರಬಿಂದು ಸಿದ್ದರಾಮಯ್ಯ ಅವರು ವೇದಿಕೆಗೆ ಬಂದಾಗ ಉಂಟಾದ ನೂಕುನುಗ್ಗಲಿನಿಂದಾಗಿ ಮಾಜಿ ಸಚಿವ ಎಚ್. ಆಂಜನೇಯ ವೇದಿಕೆಯ ಮೇಲೆ ಎಡವಿ ಬಿದ್ದರು. ಕೂಡಲೇ ವೇದಿಕೆಯಲ್ಲಿ ಇದ್ದವರು ಕೈ ಹಿಡಿದು ಮೇಲಕ್ಕೆತ್ತಿದರು. ಸಾವರಿಸಿಕೊಂಡ ಆಂಜನೇಯ ಅವರು ಸಿದ್ದರಾಮಯ್ಯ ಅವರ ಕೈಕುಲುಕಿ ಸ್ವಾಗತಿಸಿದರು.
ಸಾಧು ಕೋಕಿಲ ಮತ್ತು ಬಳಗ ವೇದಿಕೆಯಲ್ಲಿ ಹಾಡುತ್ತಿದ್ದರೆ ಜನ ಹುಚ್ಚೆದ್ದು ಕೇಕೆ ಹಾಕಿದರು. ಕುಣಿಯಲು ಜಾಗ ಇಲ್ಲದ ಕಾರಣ ಇದ್ದಲ್ಲೇ ಮೈಕೈ ಅಲ್ಲಾಡಿಸಿದರು.




