ದಿನಬಳಕೆ ವಸ್ತುಗಳ ಮೇಲೆ ತೆರಿಗೆ ಹೇರಿಕೆಯ ವಿರುದ್ಧ ಎಸ್ಡಿಪಿಐ ಸವಣೂರು ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ
ಸವಣೂರು(ಜು.20): ಕೇಂದ್ರ ಸರ್ಕಾರವು ಜಾರಿಗೊಳಿಸಿದ ದಿನಬಳಕೆಯ ಆಹಾರದ ವಸ್ತುಗಳ ಮೇಲಿನ ತೆರಿಗೆ ಹೇರಿಕೆ ಖಂಡಿಸಿ ಎಸ್ಡಿಪಿಐ ಸವಣೂರು ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆಯು ಸವಣೂರಿನಲ್ಲಿ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಪುತ್ತೂರು ನಗರ ಸಮಿತಿಯ ಅಧ್ಯಕ್ಷರಾದ ಸಿರಾಜುದ್ದೀನ್ ಎ.ಕೆ ಕೂರ್ನಡ್ಕ ಅವರು ಕೇಂದ್ರ ಬಿಜೆಪಿ ಸರಕಾರ ಅವೈಜ್ಞಾನಿಕವಾಗಿ ಜಿ.ಎಸ್.ಟಿ ಯನ್ನು ಕುಡಿಯುವ ನೀರು, ಹಾಲು, ಮಜ್ಜಿಗೆ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಹೇರಿಕೆ ಮಾಡಿ ಬಡ ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿ ಕಾರ್ಪೋರೇಟ್ ಕುಳಗಳನ್ನು ಪೋಷಿಸುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಾವು ಉಸಿರಾಡುವ ಗಾಳಿಗೂ ಜಿ.ಎಸ್.ಟಿ ಪಾವತಿಸುವ ಕಾಲವೂ ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶ್ರೀಲಂಕಾದ ಜನರು ಸರ್ಕಾರದ ವಿರುದ್ಧ ದಂಗೆ ಎದ್ದ ರೀತಿಯಲ್ಲಿ ಇಲ್ಲಿಯೂ ಕೂಡ ಸರ್ಕಾರದ ವಿರುದ್ಧ ಹೋರಾಡುವ ಅನಿವಾರ್ಯತೆ ಇದೆ ಎಂದರು.
ಸರ್ಕಾರದ ಜಿ.ಎಸ್.ಟಿ ತೆರಿಗೆಯ ಹಾಗೂ ಸರ್ವಾಧಿಕಾರಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಸವಣೂರು ಬ್ಲಾಕ್ ಅಧ್ಯಕ್ಷರಾದ ಯೂಸುಫ್ ಹಾಜಿ ಬೇರಿಕೆ, ಕಾರ್ಯದರ್ಶಿ ಇಕ್ಬಾಲ್ ಕೆನರಾ, ಎಸ್ಡಿಪಿಐ ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷರೂ ಹಾಗೂ ಸವಣೂರು ಗ್ರಾಮ ಪಂಚಾಯಿತಿಯ ಸದಸ್ಯರೂ ಆಗಿರುವ ಅಬ್ದುಲ್ ರಝಾಕ್ ಕೆನರಾ ಮತ್ತು ಬಾಬು ಎನ್, ಸವಣೂರು ಗ್ರಾಮ ಸಮಿತಿ ಕೋಶಾಧಿಕಾರಿ ಅಶ್ರಫ್ ಬಿ.ಎಮ್, ಅಲ್ ಹಿದಾಯ ಸೇವಾ ಕೇಂದ್ರದ ಗೌರವ ಸಲಹೆಗಾರದ ರಫೀಕ್ ಕೆನರಾ ಕೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.