ಉಡುಪಿ: ಚಾಕಲೇಟ್ ಕವರ್ ಗಂಟಲಲ್ಲಿ ಸಿಲುಕಿ 7 ವರ್ಷದ ಬಾಲಕಿ ಮೃತ್ಯು
ಉಡುಪಿ: ಕವರ್ ಸಹಿತ ಚಾಕಲೇಟ್ ನುಂಗಿ ಎರಡನೇ ತರಗತಿ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳವಾಡಿಯಲ್ಲಿ ಬುಧವಾರ ನಡೆದಿದೆ.
ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬವಳಾಡಿ ಗ್ರಾಮದ ನಿವಾಸಿ ಸಮನ್ವಿ ಮೃತ ಬಾಲಕಿ ಎಂದು ತಿಳಿದುಬಂದಿದೆ.
ಸಮನ್ವಿ ಉಪ್ಪುಂದದ ಖಾಸಗಿ ಆಂಗ್ಲ ಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದು, ಮುಂಜಾನೆ ಶಾಲೆಗೆ ಹೊರಡುತ್ತಿರುವ ವೇಳೆ ಹಠ ಹಿಡಿದಿದ್ದಳು. ಮಗಳನ್ನು ಸಮಾಧಾನಪಡಿಸಲು ಅಮ್ಮ ಚಾಕಲೇಟ್ ನೀಡಿದ್ದಾರೆ. ಈ ವೇಳೆ ಶಾಲಾ ವಾಹನ ಬಂದಿದ್ದು, ವಿದ್ಯಾರ್ಥಿನಿ ಕವರ್ ಸಹಿತ ಚಾಕಲೇಟ್ ನುಂಗಿದ್ದಾಳೆ. ಚಾಕಲೇಟ್ ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆ ವೇಳೆಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ತಿಳಿದುಬಂದಿದೆ.




