ನಿಗೂಢ ರಾತ್ರಿ:
ರೀಲ್ ಅಲ್ಲ ರಿಯಲ್ ಸ್ಟೋರಿ
ಕುಶಾಲನಗರ: ದಿನಾಂಕ 4 ಗುರುವಾರ ಸಮಯ ರಾತ್ರಿ 10 ಗಂಟೆ, ತುಂತುರು ಮಳೆ ವಾಣಿಜ್ಯ ನಗರಿ ಕುಶಾಲನಗರ ಹಬ್ಬದ ವ್ಯಾಪಾರ ವಹಿವಾಟು ಗಳನ್ನು ಮುಗಿಸಿ ನಿಧಾನವಾಗಿ ನಗರ ನಿಶ್ಯಬ್ದ ವಾತಾವರಣ ಕಡೆಗೆ ಹೆಜ್ಜೆಯನ್ನು ಹಾಕುತಿದೆ. ಕುಶಾಲನಗರದ ಹೆದ್ದಾರಿಯಲ್ಲಿರುವ ಟಾಟಾ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಒಂದು ಬಸ್ ಬಂದು ನಿಲ್ಲುತ್ತದೆ ಇಬ್ಬರೂ ಮಹಿಳೆಯರು ಬಸ್ ನಿಂದ ಇಳಿಯುತ್ತಾರೆ. ಸ್ವಲ್ಪ ಸಮಯದ ನಂತರ ಅವರು ಇರುವ ಸ್ಥಳಕ್ಕೆ ಒಂದು ಕಾರು ಬರುತ್ತದೆ, ಅದರಲ್ಲಿ ಅವರು ತೆರಳುತ್ತಾರೆ ….? ಪೆಟ್ರೋಲ್ ಬಂಕ್ ಮುಚ್ಚುವ ಸಮಯ ಅಲ್ಲಿನ ನೌಕರ ಎಚ್.ವಿ.ಸೋಮಶೇಖರ್ ಬಂಕ್ ನ ಮುಂಭಾಗದ ಗೆಟ್ ಹಾಕಲು ತೆರಳುತ್ತಾನೆ. ಆತನ ಕಣ್ಣಿಗೆ ಕಪ್ಪು ಬಣ್ಣದ ಸೂಟ್ ಕೇಸ್ ಗೋಚರಿಸುತ್ತದೆ. ಕೆಲವು ಕಾಲ ಗರಬಡಿದಂತೆ ನಿಲ್ಲುತ್ತಾನೆ. ನಂತರ ಚೇತರಿಸಿಕೊಂಡು ಮನದಲ್ಲಿ ಮೂಡಿದ ಕೆಟ್ಟ ಯೋಚನೆಗಳು ಬದಿಗೆ ಇಟ್ಟು ನಿಷ್ಠೆ ಮತ್ತು ಪ್ರಾಮಾಣಿಕ ಯುವಕ ಸೋಮಶೇಖರ್ ಠಾಣೆಗೆ ಕರೆ ಮಾಡಿ ವಿಷಯವನ್ನು ತಿಳಿಸುತ್ತಾನೆ.
ಕೂಡಲೇ ಪೋಲಿಸ್ ಸಿಬ್ಬಂದಿ ಡಿವೈಎಸ್ ಪಿ. ಶೈಲೇಂದ್ರ ಮತ್ತು ಸಿ.ಐ ಮಹೇಶ್ ದೇವರು ಇವರ ಗಮನಕ್ಕೆ ತರುತ್ತಾರೆ. ಅವರ ಮಾರ್ಗದರ್ಶನದಂತೆ ಸ್ಥಳಕ್ಕೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಎಸ್.ಎನ್ ಜಯಪ್ರಕಾಶ್ ಬಿಜ್ಜಳ ತೆರಳಿ ಅನಾಥವಾಗಿ ಇರುವ ಕಪ್ಪು ವರ್ಣದ ಸೂಟ್ ಕೇಸ್ ನೋಡುತ್ತಾರೆ. ಭಯದ ನಡುವೆಯು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಸೂಟ್ ಕೇಸ್ ಠಾಣೆಗೆ ತರುತ್ತಾರೆ. ನಂತರ ಡಿವೈಎಸ್ ಪಿ.ಶೈಲೇಂದ್ರ ಮತ್ತು ಸಿ.ಐ.ಮಹೇಶ್ ಇವರ ಸಮ್ಮುಖದಲ್ಲಿ ಸೂಟ್ ಕೇಸ್ ಪರಿಶೀಲನೆ ಸಂದರ್ಭದಲ್ಲಿ ಎಲ್ಲರಿಗೂ ಶಾಕ್ ಅಲ್ಲಿನ ದೃಶ್ಯ ನೋಡಿ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಆಭರಣಗಳು ಮತ್ತು ಸ್ವಲ್ಪ ನಗದು. ಕೂಡಲೇ ಸೂಟ್ ಕೇಸ್ ನಲ್ಲಿ ದೊರಕಿದ ದೂರವಾಣಿ ಸಂಖ್ಯೆಗೆ ಕರೆಮಾಡಿ ತಿಳಿಸುತ್ತಾರೆ. ವಿಷಯ ಏನೆಂದರೆ, ಸಂಬಂಧಿಗಳ ಮದುವೆಗೆ ಬೆಂಗಳೂರಿನಿಂದ ಇಬ್ಬರೂ ಮಹಿಳೆಯರು ಆಗಮಿಸುತ್ತಾರೆ. ಕುಶಾಲನಗರದ ಟಾಟಾ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಇಳಿದು ನಂತರ ಅವರ ಸಂಬಂಧಿ ಅಲ್ಲಿಗೆ ಬಂದು ಕಾರಿನಲ್ಲಿ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಜೊತೆಯಲ್ಲಿ ತಂದಿದ್ದ ಸೂಟ್ ಕೇಸ್ ಮರೆತು ರಸ್ತೆಯ ಬದಿಯಲ್ಲಿ ಬಿಟ್ಟು ತೆರಳುತ್ತಾರೆ. ಇಷ್ಟು ನಡೆದ ಘಟನೆ.
ಇಂದು ಡಿವೈಎಸ್ ಪಿ ಕಚೇರಿಗೆ ಆಗಮಿಸಿ ಕಷ್ಟ ಪಟ್ಟು ಸಂಪಾದಿಸಿದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನವನ್ನು ಮರಳಿ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಸೋಮಶೇಖರ್ ರವರ ಪ್ರಾಮಾಣಿಕತೆಗೆ ಮೆಚ್ಚಿ ನಗದು ರೂಪದಲ್ಲಿ ಬಹುಮಾನ ನೀಡುತ್ತಾರೆ. ಇದರ ಜೊತೆಯಲ್ಲಿ ಪ್ರಾಮಾಣಿಕತೆ ತೋರಿದ ಕುಶಾಲನಗರದ ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಡ ಕುಟುಂಬದಲ್ಲಿ ಜನಿಸಿದರು ಕೂಡ ಸೋಮಶೇಖರ್ ಮೈ ಬಗ್ಗಿಸಿ ದುಡಿಯುವನು ತನ್ನ ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ನಿಷ್ಠೆಯನ್ನು ಹೊಂದಿರುವನು ಯಾವಾಗಲೂ ಬೇರೆಯವರ ದುಡ್ಡಿಗೆ ಆಸೆ ಪಟ್ಟವನಲ್ಲ. ಈತನ ಪ್ರಾಮಾಣಿಕತೆಗೆ ಪೋಲಿಸ್ ಇಲಾಖೆ ಕೂಡ ಬಹುಮಾನ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ ಪಿ ಶೈಲೇಂದ್ರ, ಸಿ.ಐ ಮಹೇಶ್, ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಮಂಜುನಾಥ್ ಬಿಜ್ಜಳ, ಎಸ್.ಎನ್.ಜಯಪ್ರಕಾಶ್, ಇಸ್ಮಾಯಿಲ್ ಇದ್ದರು. …ಏನೇ ? ಇರಲಿ ಕಥೆ ಸುಖಾಂತ್ಯವಾಗಿದೆ..ಆದರೇ ? ಸಾರ್ವಜನಿಕರಿಗೆ ಬಹಳಷ್ಟು ಜವಾಬ್ದಾರಿ ಇದೆ ತಮ್ಮ ಬೆಲೆಬಾಳುವ ವಸ್ತುಗಳನ್ನು ಮತ್ತು ಹಣವನ್ನು ಜೋಪಾನವಾಗಿ ನೋಡಿಕೊಳ್ಳ ಬೇಕು. ಒಮ್ಮೆ ಕಳೆದುಕೊಂಡರೆ ಎಚ್.ವಿ.ಸೋಮಶೇಖರ್ ಅಂತವರು ಕುಶಾಲನಗರ ಪೋಲಿಸ್ ಇಲಾಖೆ ಸಿಬ್ಬಂದಿಯಂತವರು ಎಲ್ಲಾ ಕಡೆ ಸಿಗುವುದಿಲ್ಲ.
ವರದಿ: ಟಿ.ಆರ್ ಪ್ರಭುದೇವ್





