February 4, 2026

ಧಾರ್ಮಿಕ ಸ್ವಾತಂತ್ರ್ಯ ಪ್ರಜೆಗಳ ಸಂವಿಧಾನಬದ್ಧ ಹಕ್ಕು: ಬಕ್ರೀದ್ ಪ್ರಯುಕ್ತ ಕುರ್ಬಾನಿಯನ್ನು ಮುಸ್ಲಿಮರು ನಿರ್ಭೀತಿಯಿಂದ ಆಚರಿಸಿ: ಪಾಪ್ಯುಲರ್ ಫ್ರಂಟ್

0
IMG-20220709-WA0006.jpg

ಧಾರ್ಮಿಕ ಸ್ವಾತಂತ್ರ್ಯವು ಪ್ರಜೆಗಳ ಸಂವಿಧಾನಬದ್ಧ ಹಕ್ಕಾಗಿದ್ದು, ಈ ನಿಟ್ಟಿನಲ್ಲಿ ಬಕ್ರೀದ್ ಪ್ರಯುಕ್ತ ಕುರ್ಬಾನಿಯನ್ನು ನಿರ್ಭೀತಿಯಿಂದ ಆಚರಿಸಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಕುರ್ಬಾನಿ ಎಂಬುದು ಜಗತ್ತಿನಾದ್ಯಂತ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿರುವ ಮುಸ್ಲಿಮರ ಪವಿತ್ರ ಧಾರ್ಮಿಕ ಆಚರಣೆಯಾಗಿದೆ. ತ್ಯಾಗ, ಬಲಿದಾನ ಸಂಕೇತವಾಗಿರುವ ಈದುಲ್ ಅಝ್ಹಾ ಅಥವಾ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿಬಲಿ ನೀಡುವುದು ಐತಿಹಾಸಿಕ ಮಹತ್ವವನ್ನು ಹೊಂದಿದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಸಮುದಾಯದ ಜನರು ಈ ಬಲಿಕರ್ಮವನ್ನು ವರ್ಷಂಪ್ರತಿ ಬಹಳ ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಗೋ ಹತ್ಯೆ ಕಾನೂನನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಸಚಿವರು, ಶಾಸಕರು ಮತ್ತು ಕೆಲವೊಂದು ಸ್ಥಳೀಯಾಡಳಿತ ಸಂಸ್ಥೆಗಳು ಮುಸ್ಲಿಮರಲ್ಲಿ ಅನಗತ್ಯ ಗೊಂದಲ ಮತ್ತು ಭೀತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಧಾರ್ಮಿಕ ಆಚರಣೆಯು ಸಂವಿಧಾನದ ವಿಧಿ 25ರಂತೆ ಖಾತರಿಪಡಿಸಲಾದ ಪ್ರಜೆಗಳ ಮೂಲಭೂತ ಹಕ್ಕು ಕೂಡಾ ಆಗಿರುತ್ತದೆ. ಹೀಗಿರುವ ನಿರ್ದಿಷ್ಟವಾಗಿ ಕುರ್ಬಾನಿಗೆ ತಡೆಯೊಡ್ಡುವುದು ಸಂವಿಧಾನಬಾಹಿರ ಕೃತ್ಯವಾಗಿರುತ್ತದೆ. ಈ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಸಹಿಸುವುದಿಲ್ಲ.

ಮುಸ್ಲಿಮರ ಸಂವಿಧಾನಬದ್ಧ ಧಾರ್ಮಿಕ ಹಕ್ಕಾಗಿರುವ ಕುರ್ಬಾನಿ ಆಚರಣೆಯನ್ನು ಸುಸೂತ್ರವಾಗಿ ನಡೆಸಲು ಪೊಲೀಸ್ ಇಲಾಖೆ ಕ್ರಮವಹಿಸಬೇಕು. ಇದಕ್ಕೆ ಅಡಚಣೆ ಉಂಟು ಮಾಡುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಟ್ಟ ಹಾಕಬೇಕು. ರಾಜ್ಯಾದ್ಯಂತ ಮುಸ್ಲಿಮ್ ಸಮುದಾಯದ ಜನರು ಬಕ್ರೀದ್ ಹಬ್ಬವನ್ನು ನಿರ್ಭೀತಿಯಿಂದ ಆಚರಿಸುವುದನ್ನು ಖಾತರಿಪಡಿಸಬೇಕೆಂದು ನಾಸಿರ್ ಪಾಶ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!