ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ಮಂಗಳೂರು: ಪಣಂಬೂರು-ಬೈಕಂಪಾಡಿಯಲ್ಲಿರುವ ಕಾರ್ಮಿಕ ಸಚಿವಾಲಯದ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿಯನ್ನು ವಿಷ್ಣು ಮೂರ್ತಿ ಭಟ್ ಎಂದು ಗುರುತಿಸಲಾಗಿದೆ. ಪಣಂಬೂರು-ಬೈಕಂಪಾಡಿಯಲ್ಲಿರುವ ಕಾರ್ಮಿಕ ಸಚಿವಾಲಯದ ಕಚೇರಿಯಲ್ಲಿ ಆರೋಪಿ ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದ್ದು, ಈ ವೇಳೆ ಎಸಿಬಿ ಬಲೆಗೆ ವಿಷ್ಣು ಮೂರ್ತಿ ಸಿಕ್ಕಿಬಿದ್ದಿದ್ದಾರೆ.
ಪಣಂಬೂರು ನಿವಾಸಿ ಪ್ರಶಾಂತ್ ಕುಮಾರ್ ಅವರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಪತ್ನಿ ಬೇಕರಿ ಕೆಲಸ ನಿರ್ವಹಿಸುತ್ತಿದ್ದು ಇಎಸ್ಐ ಸದಸ್ಯತ್ವ ಹೊಂದಿದ್ದಾರೆ. ಪ್ರಶಾಂತ್ ಕುಮಾರ್ ಅವರು ಕೆಎಂಸಿ ವೈದ್ಯರ ಸಲಹೆಯಂತೆ ಇಎಸ್ಐ ಡಿಸ್ಪೆನ್ಸರಿಯಿಂದ ಮಾತ್ರೆ ಮತ್ತು ಇಂಜೆಕ್ಷನ್ ಪಡೆದುಕೊಂಡು ಹೋಗುತ್ತಿದ್ದರು. ಇಎಸ್ಐ ಡಿಸ್ಪೆನ್ಸರಿಯಲ್ಲಿ ಔಷಧಿ ಇಲ್ಲದಿದ್ದರೆ ಮೆಡಿಕಲ್ನಿಂದ ಖರೀದಿಸಿ ಆ ಬಿಲ್ಗಳನ್ನು ಇಎಸ್ಐ ಡಿಸ್ಪೆನ್ಸರಿಗೆ ನೀಡುತ್ತಿದ್ದರು. ಈ ಬಿಲ್ ಮಂಜೂರಾತಿಗೆ ಪ್ರಶಾಂತ್ ಕುಮಾರ್ 2 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.