ತಾಜ್ ಮಹಲ್ ರಹಸ್ಯ ಕೋಣೆ ತೆರೆಯಲು ಕೋರಿದ್ದ ಅರ್ಜಿ ವಜಾ
ಲಕ್ನೋ: ತಾಜ್ಮಹಲ್ನಲ್ಲಿನ 22 ಮುಚ್ಚಿದ ಬಾಗಿಲುಗಳನ್ನು ತೆರೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಗುರುವಾರ ತಿರಸ್ಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ನ್ಯಾಯಾಲಯ, “ಈ ವಿಷಯವಾಗಿ ಸತ್ಯಶೋಧನೆ ಸಮಿತಿ ರಚನೆಗೆ ಕೇಳುವುದು ನಿಮ್ಮ ಹಕ್ಕುಗಳ ಅಡಿಯಲ್ಲಿ ಬರುವುದಿಲ್ಲ.
ಅದು ಆರ್ ಟಿಐ ನ ವ್ಯಾಪ್ತಿಗೂ ಬರುವುದಿಲ್ಲ. ಈ ಅರ್ಜಿಯಿಂದ ನಮಗೆ ಮನವರಿಕೆಯಾಗಿಲ್ಲ ಎಂದು ಹೇಳಿದೆ. “ನಾಳಿನ ದಿನಗಳಲ್ಲಿ ನೀವು ನಮ್ಮ ಚೇಂಬರ್ ಗಳನ್ನು ನೋಡುವುದಕ್ಕೂ ಅನುಮತಿ ಕೇಳುತ್ತೀರಿ, ದಯಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವ್ಯವಸ್ಥೆಯನ್ನು ಅಣಕಿಸಬೇಡಿ” ಎಂದು ವಿಚಾರಣೆ ವೇಳೆ ಹೈಕೋರ್ಟ್ ಅರ್ಜಿದಾರರಿಗೆ ತೀಕ್ಷ್ಣವಾಗಿ ಹೇಳಿದೆ.
ಧಾರ್ಮಿಕ ಸ್ವಾತಂತ್ರ್ಯದ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶವನ್ನು ಅರ್ಜಿದಾರರು ಕೋರ್ಟ್ ಗೆ ನೀಡಿದ್ದು, ಅರ್ಜಿದಾರರ ಈ ವಾದವನ್ನು ಒಪ್ಪುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಈಗ ಅರ್ಜಿದಾರರು ಈಗ ತಿದ್ದುಪಡಿ ಮಾಡಿದ ಅರ್ಜಿ ಸಲ್ಲಿಸುವುದಕ್ಕೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಬಿಜೆಪಿ ಅಯೋಧ್ಯೆಯ ವಿಭಾಗದ ಮಾಧ್ಯಮ ಉಸ್ತುವಾರಿ ರಂಜೀತ್ ಸಿಂಗ್ ಅವರು ತಾಜ್ ಮಹಲ್ ನ 22 ಕೊಠಡಿಗಳ ಹಿಂದಿರುವ ಸತ್ಯವನ್ನು ಅರಿಯುವುದಕ್ಕೆ ಸತ್ಯಶೋಧನಾ ಸಮಿತಿ ರಚಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ವಾರ ಸಲ್ಲಿಸಿದ್ದರು.




