ಕಲ್ಲಬೆಟ್ಟು: ಸ್ಕೂಟಿಗೆ ಬೈಕ್ ಢಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಮೃತ್ಯು
ಮೂಡುಬಿದಿರೆ: ಅಪಘಾತ ವಲಯವೆಂದೇ ಪರಿಚಿತವಾಗಿರುವ ಮೂಡುಬಿದಿರೆ ಹೊರವಲಯದ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆಯಲ್ಲಿ ಸ್ಕೂಟಿಗೆ ಬೈಕ್ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಸ್ಥಳದಲ್ಲೇ ಮೃತ ಪಟ್ಟ ದುರ್ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಶಿರ್ತಾಡಿ ವಾಲ್ಪಾಡಿ ಪುನ್ಕೆದಡಿ ನಿವಾಸಿ ರಮೇಶ (38) ಸ್ಥಳದಲ್ಲೇ ಮೃತ ಪಟ್ಟ ವ್ಯಕ್ತಿ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು.
ಗಂಟಾಲ್ಕಟ್ಟೆಯ ಹೋಟೆಲ್ ನಲ್ಲಿ ಚಹಾ ಸೇವಿಸಿ ಜತೆಗಾರನೊಂದಿಗೆ ಹೋಟೆಲ್ ನಿಂದ ಹೊರಟು ಸ್ಕೂಟಿಯಲ್ಲಿ ರಸ್ತೆ ತಲುಪುವಷ್ಟರಲ್ಲಿ ವೇಣೂರು ಕಡೆಯಿಂದ ಬಂದ ಬೈಕ್ ಸ್ಕೂಟಿಗೆ ಬಡಿದ ಪರಿಣಾಮ ಸ್ಕೂಟಿ ಮಗುಚಿ ಬಿತ್ತು. ತಲೆಗೆ ತೀವ್ರ ಏಟು ತಗಲಿದ ರಮೇಶ ಸ್ಥಳದಲ್ಲೇ ಮೃತಪಟ್ಟರು.




