ತ್ರಿಕುಟ ಪರ್ವತದಲ್ಲಿ ರೋಪ್ ವೇ ಕೇಬಲ್ ಕಾರ್ ಗಳ ಢಿಕ್ಕಿ: ಇಬ್ಬರು ಪ್ರವಾಸಿಗರು ಮೃತ್ಯು, ಹಲವರಿಗೆ ಗಾಯ
ರಾಂಚಿ: ಜಾರ್ಖಂಡ್ ನ ದಿಯೋಗಢ್ ಜಿಲ್ಲೆಯ ಬಾಬಾ ಬೈದ್ಯನಾಥ್ ದೇವಾಲಯದ ಸಮೀಪದ ತ್ರಿಕುಟ ಪರ್ವತದಲ್ಲಿ ರೋಪ್ ವೇಯಲ್ಲಿ ಎರಡು ಕೇಬಲ್ ಕಾರ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಏ.10ರಂದು ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ರೋಪ್ ವೇಯಲ್ಲಿನ ಕನಿಷ್ಠ 12 ಕ್ಯಾಬಿನ್ ಗಳಲ್ಲಿ ಇನ್ನೂ 48 ಮಂದಿ ಸಿಲುಕಿಕೊಂಡಿದ್ದು, ಅವರನ್ನೆಲ್ಲಾ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ತಾಂತ್ರಿಕ ದೋಷದ ಪರಿಣಾಮ ರೋಪ್ ವೇಯಲ್ಲಿ ಎರಡು ಕೇಬಲ್ ಕಾರ್ ಗಳು ಮುಖಾಮುಖಿ ಡಿಕ್ಕಿ ಹೊಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ಹೇಳಿದ್ದಾರೆ.




