February 3, 2026

ಆಂಧ್ರಪ್ರದೇಶದಲ್ಲಿ ಎಲ್ಲ 24 ಸಚಿವರಿಂದ ರಾಜೀನಾಮೆ: ಸಚಿವ ಸಂಪುಟವನ್ನೇ ವಿಸರ್ಜಿಸಿದ ಸಿ.ಎಂ ಜಗನ್

0
image_editor_output_image-1927832799-1649342737171

ಹೈದರಾಬಾದ್: ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್ಮೋಹನ್ ರೆಡ್ಡಿ ಎಲ್ಲ 24 ಸಚಿವರ ರಾಜಿನಾಮೆ ಪಡೆದು ಸಚಿವ ಸಂಪುಟವನ್ನೇ ವಿಸರ್ಜಿಸಿದ್ದಾರೆ. ಇನ್ನೆರಡು ವರ್ಷದಲ್ಲಿ ಆಂಧ್ರ ಪ್ರದೇಶವೂ ಚುನಾವಣೆ ಎದುರಿಸಲಿದ್ದು, ಈ ಹಿನ್ನೆಲೆಯಲ್ಲಿ ಓಲೈಕೆಯ ಸಚಿವ ಸಂಪುಟ ರಚಿಸಲು ಜಗನ್ ಮುಂದಾಗಿದ್ದಾರೆ.

ಹೊಸತಾಗಿ ಸಂಪುಟ ಸೇರಲಿರುವ ಸಚಿವರು ಎ.11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿಗಳಿವೆ. ಹೊಸ ಸಂಪುಟದಲ್ಲಿ ಸಿಎಂ ಜಗನ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸ್ಥಾನದಿಂದ ರಾಜಿನಾಮೆ ನೀಡಿರುವವರನ್ನು ಪ್ರತೀ ಜಿಲ್ಲೆಯ ಉಸ್ತುವಾರಿ ಮತ್ತು ಪಕ್ಷದ ಜವಾಬ್ದಾರಿ ನೀಡಲು ಜಗನ್ ರೆಡ್ಡಿ ಚಿಂತನೆ ನಡೆಸಿದ್ದಾರೆ. ಹೊಸ ಸಚಿವರ ಪಟ್ಟಿಯನ್ನು ಎ.10ರಂದು ಅಂತಿಮಗೊಳಿಸಲಿದ್ದಾರೆ. ಇಂದು ಮಧ್ಯಾಹ್ನ ಕ್ಯಾಬಿನೆಟ್ ಸಚಿವರ ಸಭೆ ಕರೆದು ಸಿಎಂ ಜಗನ್ಮೋಹನ್ ರೆಡ್ಡಿ ಸೂಚನೆ ನೀಡಿದ ಬೆನ್ನಲ್ಲೇ ಎಲ್ಲರೂ ರಾಜಿನಾಮೆ ಪತ್ರ ನೀಡಿದ್ದರು.

ಬುಧವಾರ ರಾಜ್ಯಪಾಲ ಬಿಸ್ವಭೂಶನ್ ಹರಿಚಂದ್ ಅವರನ್ನು ಭೇಟಿಯಾಗಿದ್ದ ಜಗನ್ ರೆಡ್ಡಿ ಸಚಿವ ಸಂಪುಟ ವಿಸರ್ಜಿಸಿ, ಹೊಸ ಸಂಪುಟ ರಚಿಸುವ ಬಗ್ಗೆ ಮಾಹಿತಿ ನೀಡಿದ್ದರು. 2019ರ ಚುನಾವಣೆಯಲ್ಲಿ ಭಾರೀ ಜಯಭೇರಿ ಗಳಿಸಿ ಅಧಿಕಾರಕ್ಕೇರಿದ್ದ ವೈಎಸ್ಆರ್ ಪಕ್ಷದ ಜಗನ್ಮೋಹನ್ ರೆಡ್ಡಿ 2024ರ ಚುನಾವಣೆ ಮುಂದಿಟ್ಟು ಹೊಸ ಸಚಿವ ಸಂಪುಟ ರಚಿಸಲಿದ್ದಾರೆ. ಮೂರು ವರ್ಷದ ಬಳಿಕ ಸಿಎಂ ಸ್ಟ್ರಾಟಜಿ ಬದಲಾಯಿಸಿದ್ದು, ಮುಂದಿನ ಚುನಾವಣೆಗೆ ರೆಡಿಯಾಗಲು ಹೊಸ ತಂಡ ಕಟ್ಟಲಿದ್ದಾರೆ. ಅಲ್ಲದೆ, ಮಂತ್ರಿಯಾದವರು ಯಾರು ಕೂಡ ಆಡಳಿತ ವಿರೋಧಿ ಅಲೆ ಎದುರಿಸುವಂತಾಗಬಾರದು. ಅದಕ್ಕಾಗಿ ಎಲ್ಲರಿಗೂ ಅವಕಾಶ ನೀಡುತ್ತಿದ್ದೇನೆ ಎಂದು ಜಗನ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಜಗನ್ ರೆಡ್ಡಿ ವಿಡಿಯೋ ಕಾನ್ಫರೆನ್ಸ್ ನಲ್ಲಿಯೇ 13 ಹೊಸ ಜಿಲ್ಲೆಗಳನ್ನು ಘೋಷಿಸಿದ್ದರು. ಇದರಿಂದ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೇರಿದ್ದು ಪ್ರತೀ ಜಿಲ್ಲೆಗೂ ಸಂಸತ್ ಪ್ರಾತಿನಿಧ್ಯ ಸಿಗಲಿದೆ. ಆಡಳಿತ ವಿಕೇಂದ್ರೀಕರಣ, ಪ್ರತಿ ಮನೆಗೂ ಸರಕಾರದ ಯೋಜನೆ ತಲುಪಿಸುವ ಉದ್ದೇಶದಿಂದ ಜಿಲ್ಲೆಯನ್ನು ವಿಭಜಿಸಲಾಗಿದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!