ಸುಳ್ಯದಲ್ಲೂ ಕಾಣಲಾರಂಭಿಸಿದ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಿರಾಕರಣೆ ಬ್ಯಾನರ್
ಸುಳ್ಯ: ಹಿಜಾಬ್ ವಿವಾದದ ಬಳಿಕ ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರಸ್ಥರು ಹೈಕೋರ್ಟ್ ತೀರ್ಪಿನ ವಿರುದ್ಧ ಬಂದ್ ಮಾಡಿರುವ ಹಿನ್ನಲೆಯಲ್ಲಿ ಇದೀಗ ಬಹುತೇಕ ಜಾತ್ರೋತ್ಸವ ಸಂತೆ ಮಾರುಕಟ್ಟೆಯಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧಿಸಲಾಗುತ್ತಿದೆ. ಇದೀಗ ಈ ವ್ಯಾಪಾರ ನಿಷೇಧ ಸುಳ್ಯಕ್ಕೂ ಕಾಲಿರಿಸಿದ್ದು, ಇಲ್ಲಿನ ಜಯನಗರದ ಜಾತ್ರೋತ್ಸವದಲ್ಲಿ ಮುಸ್ಲಿಂಮರಿಗೆ ವ್ಯಾಪಾರ ನಿಷೇಧಿಸಿರುವ ಕುರಿತಾದ ಬ್ಯಾನರ್ ಅಳವಡಿಸಲಾಗಿದೆ.
ಜಯನಗರದ ಆದಿಮೊಗೇರ್ಕಳ ಕೊರಗಜ್ಜನ ಸನ್ನಿಧಾನದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರು ವ್ಯಾಪಾರ ನಡೆಸಬಾರದು ಎಂಬ ಬ್ಯಾನರ್ ಅಳವಡಿಸಲಾಗಿದೆ.
ಇದೇ ರೀತಿ ಪಂಜ, ಕನಕಮಜಲು ಜಾತ್ರೆಗಳಲ್ಲಿ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಜಾತ್ರೋತ್ಸವ ಸಮಾರಂಭದಲ್ಲಿ ವ್ಯಾಪಾರಂ ನಡೆಸಿ ಜೀವನ ನಿರ್ವಹಿಸುತ್ತಿದ್ದ ಚರ್ಮುರಿ ವ್ಯಾಪಾರಸ್ಥ ನಾಸೀರ್ ಜಯನಗರ ಎಂಬುವವರು ಮಾಧ್ಯಮದೊಂದಿಗೆ ಮಾತನಾಡಿ ಈ ರೀತಿಯ ಘಟನೆ ಮನಸ್ಸಿಗೆ ನೋವು ತಂದಿದೆ. ಕುಟುಂಬದ ಜೀವನ ಆಧಾರವಾಗಿ ನಾನು ಮಾತ್ರ ದುಡಿಯುವವನು. ಈ ರೀತಿಯ ಚರ್ಮುರಿ, ಮಾವಿನಕಾಯಿ, ನೆಲ್ಲಿಕಾಯಿ,ಪೈನಾಪಲ್, ಕಲ್ಲಂಗಡಿ ಮುಂತಾದ ಹಣ್ಣು-ಹಂಪಲುಗಳನ್ನು ಮಾರಾಟ ಮಾಡಿ ತನ್ನ ಮನೆಯನ್ನು ನಡೆಸುತ್ತಿದ್ದೆ. ಆದರೆ ಇದೀಗ ಜಾತ್ರೋತ್ಸವ ಸ್ಥಳಗಳಲ್ಲಿ ನಮ್ಮನ್ನು ವ್ಯಾಪಾರಕ್ಕೆ ಅನುಮತಿಸಿದೆ ನಿರಾಕರಿಸುವುದು ಸರಿಯಲ್ಲ. ಬಡವನಾದ ನನ್ನ ಮತ್ತು ನನ್ನ ಕುಟುಂಬದವರ ಹೊಟ್ಟೆಗೆ ಈ ರೀತಿ ಅನ್ಯಾಯ ಮಾಡಿರುವುದು ತುಂಬಾ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಈ ರೀತಿಯ ಘಟನೆಗಳು ಮುಂದೆ ಯಾವ ಹಾದಿಯನ್ನು ಹಿಡಿಯುತ್ತದೆ ಎಂಬುವುದು ಕಾದುನೋಡಬೇಕಾಗಿದೆ.





