ವೈದ್ಯೆ ಆತ್ಮಹತ್ಯೆ ಪ್ರಕರಣ: ಬಿಜೆಪಿ ಮುಖಂಡನ ಬಂಧನ
ನವದೆಹಲಿ: ಗರ್ಭಿಣಿಯೊಬ್ಬಳ ಸಾವಿನ ಆರೋಪದ ಹಿನ್ನೆಲೆಯಲ್ಲಿ ಕಿರುಕುಳ ನೀಡಿರುವುದಕ್ಕೆ ಮನನೊಂದು ರಾಜಸ್ಥಾನದ ದೌಸಾದಲ್ಲಿನ ವೈದ್ಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಜಿತೇಂದ್ರ ಗೋಥ್ವಾಲ್ ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಗರ್ಭಿಣಿ ಸಾವಿಗೆ ಡಾ.ಅರ್ಚನಾ ಶರ್ಮಾ ಕಾರಣ ಎಂದು ಆರೋಪಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಗೆ ಗೋಥ್ವಾಲ್ ಕುಮ್ಮಕ್ಕು ನೀಡಿರುವುದಾಗಿ ವರದಿ ವಿವರಿಸಿದೆ. ಮಂಗಳವಾರ ರಾಜಸ್ಥಾನದ ದೌಸಾದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾದ ನಂತರ ಮಹಿಳೆ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ನಡೆದಿತ್ತು.
ಮಹಿಳೆಯ ಕುಟುಂಬ ಸದಸ್ಯರು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಡಾ. ಅರ್ಚನಾ ಶರ್ಮಾ ಹಾಗೂ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.





