ಹಲಾಲ್ ಮುಸ್ಲಿಮರಿಗೆ ಬೇಕಾಗಿರಬಹುದು ಆದರೆ ಹಿಂದೂಗಳಿಗೆ ಬೇಡ: ಹಲಾಲ್ ಬೇಕಾದವರು ವಿದೇಶಕ್ಕೆ ಹೋಗಲಿ: ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು: ಹಲಾಲ್ ಮುಸ್ಲಿಮರಿಗೆ ಬೇಕಾಗಿರಬಹುದು ಆದರೆ ಹಿಂದೂಗಳಿಗೆ ಅದು ಬೇಡ. ಹಿಂದೂಗಳು ಅಂತಹ ಮಾಂಸವನ್ನು ಸ್ವೀಕರಿಸಕೂಡದು ಎಂದು ಆರ್ ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕಿಡಿಕಾರಿದ್ದಾರೆ.
ಅರಬ್ ನ ಚಿಂತನೆಯನ್ನು ಭಾರತಕ್ಕೆ ತರುವುದು ಬೇಡ. ಅಲ್ಲಿನ ಚಿಂತನೆ ಬೇಕೆಂದರೆ ಅಂತವರು ಅರಬ್ ಗೆ ಹೋಗಲಿ. ಭಾರತದಲ್ಲಿ ಭಾರತದ ಚಿಂತನೆ ಮಾತ್ರ ಇರಲಿ. ನಮ್ಮ ಸಂಪ್ರದಾಯ ಉಳಿಸಬೇಕು. ಹಾಗಾಗಿ ಹಲಾಲ್ ಗೆ ನಮ್ಮ ಬೆಂಬಲವಿಲ್ಲ. ಹಲಾಲ್ ಬಗ್ಗೆ ತನಗೇನು ಗೊತ್ತಿಲ್ಲ. ಅದರ ಬಗ್ಗೆ ಅಧ್ಯಯನ ಮಾಡಬೇಕಷ್ಟೆ. ಹಿಂದೂಗಳಿಗೆ ತಲೆಯಿಲ್ಲ. ಅದಕ್ಕಾಗಿಯೇ ಅವರು ಹಲಾಲ್ ವಿಚಾರವನ್ನು ತೆಗೆದುಕೊಂಡು ಬರುತ್ತಾರೆ ಎಂದರು.
ಕೊಲ್ಲೂರು ದೇವಳದಲ್ಲಿ ಸಲಾಂ ಆರತಿ ವಿಚಾರವಾಗಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಹಿಂದೂಗಳ ಸ್ವಲ್ಪ ಬುದ್ಧಿ ಕಡಿಮೆ ಇರುವ ಜನಗಳು. ಎಲ್ಲರಿಗೂ ಗೌರವ ಕೊಡುವುದಕ್ಕೆ ಹೋಗುತ್ತಾರೆ. ಕೊಲ್ಲೂರಿನಲ್ಲಿ ಸಲಾಂ ಪೂಜೆಯಿಲ್ಲ ಪ್ರದೋಷ ಪೂಜೆ ಇದೆ ಎಂದು ಆಡಳಿತ ಮಂಡಳಿಯವರೇ ಹೇಳಿದ್ದಾರೆ. ಯಾರೊ ಒಬ್ಬ ಮುಸಲ್ಮಾನ ಹೊರಗಡೆ ನಿಂತುಕೊಂಡು ಇದು ಸಲಾಂ ಪೂಜೆ ಅಂದಿದ್ದಾನೆ. ಆಗ ಇದು ಸಲಾಂ ಪೂಜೆ ಎಂದು ಪ್ರಚಾರ ಆಗಿರಬಹುದು. ಇದರ ಹಿಂದೆ ಮುಂದೆ ಏನು ಗೊತ್ತಿಲ್ಲ. ನಾವು ಯಾವುದೇ ಪೂಜೆ ಮಾಡಬೇಕು ಅಂದರೆ ಅದು ಹಿಂದೂ ಪದ್ದತಿ ಪ್ರಕಾರ ಪೂಜೆ ಆಗಬೇಕು. ಸಲಾಂ ಎಂದು ಹೇಳುವುದೇಕೆ. ನಮಸ್ಕಾರ ಎಂದು ಹೇಳಬಹುದಲ್ಲವೇ ಎಂದು ಹೇಳಿದರು.





