ಹಿಜಾಬ್ ಧರಿಸಿದ್ದಕ್ಕಾಗಿ ಕಾಲೇಜು ಆಡಳಿತ ಮಂಡಳಿಯಿಂದ ಕಿರುಕುಳ: ಕಾನೂನು ಕಾಲೇಜಿನ ಪ್ರಾಂಶುಪಾಲೆ ರಾಜೀನಾಮೆ
ಪಾಲ್ಘರ್: ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬಳಿಕ ಹಿಜಾಬ್ ಧರಿಸಿದ್ದಕ್ಕಾಗಿ ಕಾಲೇಜು ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಾಜೀನಾಮೆ ನೀಡಿದ್ದಾರೆ.
ವಿರಾರ್ ಪರಿಸರದ ವಿವಾ ಕಾಲೇಜ್ ಆಫ್ ಲಾ ಇಲ್ಲಿನ ಪ್ರಾಂಶುಪಾಲೆ ಬತ್ತುಲ್ ಹಮ್ಮಿದ್ ತಮ್ಮ ರಾಜೀನಾಮೆ ಪತ್ರದಲ್ಲಿ, ಅನಾನುಕೂಲ ಮತ್ತು ಹಿಜಾಬ್ ಧರಿಸುವ ಬಗ್ಗೆ ಉಸಿರುಗಟ್ಟಿಸುವ ಭಾವನೆಯಿಂದ ಹುದ್ದೆಯನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ.
ಹಿಜಾಬ್ ಧರಿಸುವುದು ಹಿಂದೆಂದೂ ಸಮಸ್ಯೆಯಾಗಿರಲಿಲ್ಲ. ಆದರೆ ಕರ್ನಾಟಕದಲ್ಲಿ ವಿವಾದದ ಬಳಿಕ ಅದು ವಿಷಯವಾಯಿತು. ತನ್ನೊಂದಿಗೆ ಸಹಕರಿಸದಂತೆ ಇತರ ಸಿಬಂದಿಗೆ ಕಾಲೇಜು ಆಡಳಿತ ಮಂಡಳಿ ಸೂಚನೆ ನೀಡಿದ್ದು, ನಮ್ಮ ಆಪ್ತ ಸಹಾಯಕರು ಕೂಡ ನಿತ್ಯದ ಕೆಲಸದಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಹಮ್ಮಿದ್ ಆರೋಪಿಸಿದ್ದಾರೆ. ಆದರೆ ಕಾಲೇಜು ಆಡಳಿತ ಮಂಡಳಿ ಆರೋಪಗಳನ್ನು ತಳ್ಳಿಹಾಕಿದೆ.
ಕೆಲವು ತಿಂಗಳ ಹಿಂದೆ ನೆರೆಯ ಥಾಣೆ ಜಿಲ್ಲೆಯ ಭಿವಂಡಿಯ ಶಾಲೆಯೊಂದರ ಇಬ್ಬರು ಶಿಕ್ಷಕಿಯರನ್ನು ಹಿಜಾಬ್ ಧರಿಸಿ ಕೆಲಸಕ್ಕೆ ಬಾರದಂತೆ ತಡೆದಿದ್ದ ಘಟನೆ ಸಂಭವಿಸಿತ್ತು. ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಮಧ್ಯಪ್ರವೇಶಿಸಿ ರಾಜ್ಯ ಶಿಕ್ಷಣ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತ ನಾಡಿ ಸಮಸ್ಯೆ ಬಗೆಹರಿಸಲಾಗಿತ್ತು.




