ಮಕ್ಕಳ ಎದುರೇ ಪತ್ನಿಯ ಕತ್ತು ಕೊಯ್ದು ಹತ್ಯೆಗೈದ ಪತಿ
ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ 36 ವರ್ಷದ ವ್ಯಕ್ತಿಯೋರ್ವ ಮಕ್ಕಳ ಎದುರೇ ಪತ್ನಿಯ ಕತ್ತು ಕೊಯ್ದು ಹತ್ಯೆಗೈದು, ನಂತರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಸೋಮವಾರ ಮುಂಜಾನೆ ಅತ್ತಿಬೆಲೆಯಲ್ಲಿ ನಡೆದಿದೆ.
ಆರೋಪಿ ಸಂಪತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಹತ್ಯೆಯಾದ ಮಹಿಳೆಯನ್ನು ಲಾವಣ್ಯ (30) ಎಂದು ಗುರ್ತಿಸಲಾಗಿದೆ.
ಸಂಪತ್ ಕುಮಾರ್ ಅಬ್ಬನಪಾಳ್ಯದ ನಿವಾಸಿಯಾಗಿದ್ದು, ಜಿಗಣಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ.
ಮದ್ಯದ ಅಮಲಿನಲ್ಲಿದ್ದ ಸಂಪತ್ ಕುಮಾರ್ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪತ್ನಿಯೊಂದಿಗೆ ಜಗಳಕ್ಕಿಳಿದಿದ್ದಾನೆ. ಮಾತಿನ ಚಕಮಕಿ ವೇಳೆ ಅಡುಗೆ ಮನೆಯಲ್ಲಿದ್ದ ಚಾಕು ತಂದು ಪತ್ನಿಯ ಕುತ್ತಿಗೆ ಸೀಳಿಸಿದ್ದಾನೆ. ಬಳಿಕ ಅದೇ ಚೂರಿಯಿಂದ ತನ್ನ ಕತ್ತನ್ನೂ ಕೊಯ್ದುಕೊಂಡಿದ್ದಾನೆ.
ಘಟನೆ ವೇಳೆ ಲಾವಣ್ಯ ಅವರನ್ನು ರಕ್ಷಣೆ ಮಾಡಲು ಬಂದಿದ್ದ ಅವರ ಪುತ್ರನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.




