ಸ್ವಗ್ರಾಮಕ್ಕೆ ಆಗಮಿಸಿದ ನವೀನ್ ಮೃತದೇಹ
ಹರಿಹರ: ಉಕ್ರೇನ್ ಯುದ್ಧ ಭೂಮಿಯಲ್ಲಿ ಮೃತಪಟ್ಟಿದ್ದ ನವೀನ್ ಪಾರ್ಥಿವ ಶರೀರ ರಾಣೆಬೆನ್ನೂರು ತಾಲೂಕಿನ ಚಳಗೇರಿ ಸ್ವಗ್ರಾಮಕ್ಕೆ ಆಗಮಿಸಿದ್ದು, ನವೀನ್ ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
21 ದಿನಗಳ ಹಿಂದೆ ಉಕ್ರೇನ್ನಲ್ಲಿ ರಷ್ಯಾ ಸೇನೆ ನಡೆಸಿದ್ದ ಶೆಲ್ ದಾಳಿಯಲ್ಲಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದರು. ಅವರ ಮೃತದೇಹವು ಇಂದು ತಾಯ್ನಾಡಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ, ಕುಟುಂಬಸ್ಥರು ಮೃತದೇಹವನ್ನು ಬರಮಾಡಿಕೊಂಡರು. ಈ ಬಳಿಕ, ಸ್ವಗ್ರಾಮ ಚಳಗೇರಿಗೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಯಿತು.
ಹರಿಹರ ತಾಲೂಕು ಆಸ್ಪತ್ರೆಗೆ ತಲುಪಿದ ನವೀನ್ ಮೃತದೇಹವನ್ನು ಶೀಲ್ಡ್ ಬಾಕ್ಸ್ನಿಂದ ಕೋಲ್ಡ್ ಬಾಕ್ಸ್ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಂದ ಚಳಗೇರಿಯತ್ತ ಹೊರಟು, ಸ್ವಗ್ರಾಮಕ್ಕೆ ಆಗಮಿಸಿದೆ. ನವೀನ್ ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೀಗ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ಬಳಿಕ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪೂಜೆಯನ್ನು ನವೀನ್ ಪಾರ್ಥೀವ ಶರೀರಕ್ಕೆ ಕುಟುಂಬಸ್ಥರು ಸಲ್ಲಿಸಲಿದ್ದಾರೆ. ಈ ನಂತರ ಮೆರವಣಿಗೆ ನಡೆಸಿ, ಎಸ್ ಎಸ್ ಆಸ್ಪತ್ರೆಗೆ ದೇಹದಾನ ಮಾಡಲಿದ್ದಾರೆ.




