March 23, 2026

ಸುಳ್ಯ: ಮನೆಯೊಂದಕ್ಕೆ ದಾಳಿನಡೆಸಿದ ದರೋಡೆಕೋರರು:
ಮಾರಕಾಸ್ತ್ರಗಳನ್ನು ತೋರಿಸಿ ನಗ-ನಗದು ಲೂಟಿ ಮಾಡಿ ಪರಾರಿ

0
istockphoto-623985786-612x612.jpg

ಸುಳ್ಯ: ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಎಂಬುವವರ ಮನೆಗೆ ನಿನ್ನೆ 8.30 ರ ಸಮಯದಲ್ಲಿ ದರೋಡೆಕೋರರು ಅಂಬಾಶ್ರಮ ಮನೆಗೆ ನುಗ್ಗಿ ಮನೆಮಂದಿಯನ್ನು ಮಚ್ಚು ಹಿಡಿದು ಬೆದರಿಸಿ 100 ಗ್ರಾಂ. ಚಿನ್ನ ಹಾಗೂ 1.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಂಪಾಜೆಯಲ್ಲಿ ದೇವರ ಪೂಜಾ ಕಾರ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಬರೀಶ್ ಭಟ್ ಅವರ ಕುಟುಂಬ ಹೆಸರುವಾಸಿಯಾಗಿದ್ದು, ಸಮಾಜದಲ್ಲಿ ತಮ್ಮ ಧಾರ್ಮಿಕ ಕಾರ್ಯಗಳಿಂದ ಗುರುತಿಸಿಕೊಂಡವರು. ಅವರ ಇಬ್ಬರು ಪುತ್ರರು ಶ್ರೀವತ್ಸ ಹಾಗೂ ಶ್ರೀನಿಧಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದಾರೆ. ಇತ್ತೀಚೆಗಷ್ಟೇ ಶ್ರೀವತ್ಸ ತಮ್ಮ ಪತ್ನಿ, ಇಬ್ಬರು ಅವಳಿ ಮಕ್ಕಳೊಂದಿಗೆ ಊರಿಗೆ ಬಂದಿದ್ದರು. ಕಳ್ಳತನ ನಡೆದ ನಿನ್ನೆಯ ದಿನ ಶ್ರೀವತ್ಸ ಹಾಗೂ ಅಂಬರೀಶ್ ಭಟ್ ಅವರು ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರ ಗುಂಪೊಂದು ಮನೆಗೆ ನುಗ್ಗಿದೆ.

ಮೊದಲು ಬಂದವರೇ ಶ್ರೀವತ್ಸ ಅವರ ಪತ್ನಿಯ ತಾಳಿ ಸರವನ್ನು ಕಿತ್ತುಕೊಂಡಿದ್ದಾರೆ. ಆಗ ತಾನೆ ತೊಟ್ಟಿಲಲ್ಲಿ ಮಲಗಿದ್ದ ಅವಳಿ ಮಕ್ಕಳಿಗೆ ಏನೂ ಮಾಡಬೇಡಿ ಎಂದು ಮನೆಯವರು ಗೊಗರೆದಿದ್ದಾರೆ. ಎಳನೀರು ಕಡಿಯವ ಮಚ್ಚು ಹಿಡಿದಿದ್ದ ದರೋಡೆಕೋರರು ಮನೆಯ ಬೀರುವಿನ ಕೀಲಿ ಕೈ ನೀಡುವಂತೆ ಹೇಳಿದ್ದಾರೆ. ಜೀವ ಭಯದಿಂದ ಮಹಿಳೆಯರು ಕೀ ನೀಡಿದ್ದಾರೆ. ಅದರಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿ ಕತ್ತಲಲ್ಲಿ ಪರಾರಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ದರೋಡೆ ಪ್ರಕರಣದಲ್ಲಿ ಅತ್ಯಂತ ದೊಡ್ಡ ಪ್ರಕರಣ ಇದಾಗಿದೆ. ಈ ಬಗ್ಗೆ ಮಂಗಳೂರಿನಿಂದ ಉನ್ನತ ಮಟ್ಟದ ಪೊಲೀಸ್ ತಂಡ ಈಗಾಗಲೇ ಅಂಬಾಶ್ರಮಕ್ಕೆ ಬಂದು ತನಿಖೆ ಕೈಗೊಂಡಿದೆ. ಶ್ವಾನ ದಳ, ಬೆರಳಚ್ಚು ತಂಡಗಳು ಈಗಾಗಲೇ ತನಿಖೆ ನಡೆಸಿದ್ದು ಇದೀಗ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!